ಬೆಂಗಳೂರು: ರಾಜ್ಯದ ಏಳು ಕೇಂದ್ರ ಕಾರಾಗೃಹಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 79 ಕೈದಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲು ರಾಜ್ಯಪಾಲ ವಜೂಭಾಯಿ ವಾಲಾ ಒಪ್ಪಿಗೆ ಸೂಚಿಸಿದ್ದಾರೆ.
ಬಿಡುಗಡೆಗೆ ಅರ್ಹರಾದ 93 ಕೈದಿಗಳ ಪಟ್ಟಿಯನ್ನು ರಾಜ್ಯ ಸರ್ಕಾರವು ರಾಜ್ಯಪಾಲರಿಗೆ ಕಳುಹಿಸಿತ್ತು. ಅದನ್ನು ಪರಿಶೀಲಿಸಿದ ರಾಜ್ಯಪಾಲರು,14 ಕೈದಿಗಳನ್ನು ಪಟ್ಟಿಯಿಂದ ಹೊರಗಿಟ್ಟು ಉಳಿದ ಕೈದಿಗಳ ಬಿಡುಗಡೆಯ ಕಡತಕ್ಕೆ ಸಹಿ ಮಾಡಿ ಗೃಹ ಇಲಾಖೆಗೆ ಕಳುಹಿಸಿದ್ದಾರೆ.
‘ರಾಜ್ಯಪಾಲರು ನೀಡಿದ ಕಡತವನ್ನು ಕಾರಾಗೃಹ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಕಳುಹಿಸಲಾಗಿದೆ. ಕೈದಿಗಳ ಬಿಡುಗಡೆಯ ದಿನಾಂಕವನ್ನು ಅವರೇ ನಿಗದಿಪಡಿಸಲಿದ್ದಾರೆ’ ಎಂದು ಗೃಹ ಇಲಾಖೆಯ ಕಾರ್ಯದರ್ಶಿ ಉಮೇಶ್ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
107 ಕೈದಿಗಳ ಬಿಡುಗಡೆಗೆ ಪ್ರಸ್ತಾವ: ಸನ್ನಡತೆ ಆಧಾರದಲ್ಲಿ ಕೈದಿಗಳ ಬಿಡುಗಡೆಗೆ ರೂಪಿಸಿರುವ ನಿಯಮಗಳನ್ವಯ 107 ಕೈದಿಗಳನ್ನು ಬಿಡುಗಡೆ ಮಾಡುವಂತೆ ಕಾರಾಗೃಹಗಳ ಸುಧಾರಣಾ ಸಲಹಾ ಸಮಿತಿಯು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು.
ಪ್ರಸ್ತಾವ ಪರಿಶೀಲಿಸಿದ್ದ ಸಚಿವ ಸಂಪುಟ, 93 ಕೈದಿಗಳ ಬಿಡುಗಡೆಗಷ್ಟೇ ರಾಜ್ಯಪಾಲರಿಗೆ ಕಡತ ರವಾನಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.