ಉಡುಪಿ: ಎಂಟು ಮಂದಿಯನ್ನು ವಂಚಿಸಿ ವಿವಾಹವಾಗಿ ಅವರಿಂದ ಆಭರಣ ಮತ್ತು ಹಣ ಪಡೆದು ಪರಾರಿಯಾಗಿದ್ದ ಕಿನ್ನಿಗೋಳಿಯ ರಾಜೇಶ್ ಅಂಚನ್ (35) ಅಲಿಯಾಸ್ ಸುಕುಮಾರ್ ಎಂಬಾತನನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
ಮಲ್ಪೆಯ ರೇವತಿ, ಮಂಗಳೂರು ದೇರಳಕಟ್ಟೆಯ ಮೀನಾಕ್ಷಿ, ಕಾಸರಗೋಡಿನ ಶಾಂಭವಿ, ಕಾಪುವಿನ ಪ್ರೇಮ, ಉಪ್ಪಿನಂಗಡಿಯ ಜಯಂತಿ, ಧರ್ಮಸ್ಥಳದ ಜಯಂತಿ, ಮಡಿಕೇರಿಯ ಸುನಂದಾ, ವಿಟ್ಲದ ಶುಭ ಎಂಬುವರನ್ನು ತಾನು ವಿವಾಹವಾಗಿದ್ದೆ ಎಂದು ಈತ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.
4ನೇ ತರಗತಿ ಓದಿರುವ ರಾಜೇಶ್ ಅಡುಗೆ ಕೆಲಸ ಮಾಡುತ್ತಿದ್ದ. ಕೆಲಸದ ಸ್ಥಳದಲ್ಲಿ ಜನರನ್ನು ಪರಿಚಯಿಸಿಕೊಂಡು, ತಾನು ಅವಿವಾಹಿತ ಎಂದು ಹೇಳಿಕೊಳ್ಳುತ್ತಿದ್ದ. ಒಬ್ಬರನ್ನು ಮದುವೆಯಾಗಿ ಕೆಲ ತಿಂಗಳು ಸಂಸಾರ ನಡೆಸಿ, ನಂತರ ಯಾವುದಾದರೊಂದು ನೆಪ ಹೇಳಿ ಪತ್ನಿ ಮತ್ತು ಅವರ ಮನೆಯವರಿಂದ ನಗ, ನಗದು ಪಡೆದು ಪರಾರಿಯಾಗುವ ಚಾಳಿ ರೂಢಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ವಿಟ್ಲದ ಶುಭ ಎಂಬುವರನ್ನು 2011ರಲ್ಲಿ ವಿವಾಹವಾಗಿದ್ದ. ಈತ ಕೆಲ ತಿಂಗಳ ನಂತರ ದುಬೈಗೆ ಹೋಗುತ್ತೇನೆ ಎಂದು ಹೇಳಿ ಇಪ್ಪತ್ತು ಸಾವಿರ ರೂಪಾಯಿ ನಗದು, ಚಿನ್ನಾಭರಣ ಪಡೆದು ನಾಪತ್ತೆಯಾಗಿದ್ದ.
ಪತಿ ಕಾಣೆಯಾಗಿರುವ ಬಗ್ಗೆ ವಿಟ್ಲ ಪೋಲಿಸ್ ಠಾಣೆಯಲ್ಲಿ ಶುಭ ದೂರು ದಾಖಲಿಸಿದ್ದರು. ಈ ಸುದ್ದಿ ಪತ್ರಿಕೆಯೊಂದರಲ್ಲಿ ಭಾವಚಿತ್ರ ಸಹಿತ ಪ್ರಕಟಗೊಂಡಿತ್ತು. ಇದನ್ನು ನೋಡಿದ ಮಲ್ಪೆ ರೇವತಿಗೆ ತಾನು ವಂಚನೆಗೆ ಒಳಗಾಗಿದ್ದು ಗೊತ್ತಾಯಿತು. ಆಗ ಅವರೂ ಠಾಣೆಗೆ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಸೋಮವಾರಪೇಟೆಯಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ಕಾರ್ಯಾಚರಣೆ ಕೈಗೊಂಡು ಆತನನ್ನು ಬಂಧಿಸಿದೆವು ಎಂದು ಮಲ್ಪೆ ಎಸ್ಸೈ ಲಿಂಗರಾಜು ತಿಳಿಸಿದ್ದಾರೆ.
ಸೋಮವಾರ ಪೇಟೆಯಲ್ಲಿಯೂ ರಾಜೇಶ್ ಅಡುಗೆ ಕೆಲಸ ಮಾಡುತ್ತಿದ್ದ, ಒಂದೊಂದು ಕಡೆ ಒಂದೊಂದು ಹೆಸರಿನಿಂದ ಪರಿಚಯಿಸಿಕೊಳ್ಳುತ್ತಿದ್ದ ಮತ್ತು ಅನಾಥ ಎಂದು ಹೇಳಿಕೊಳ್ಳುತ್ತಿದ್ದ. ವಿಟ್ಲದ ಶುಭ ಅವರಿಗೆ ಸುಕುಮಾರ್ ಎಂದು ಪರಿಚಯಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
`ಹೆಂಡತಿಯರ ಕಾಟ ಸಹಿಸಲಾಗದೆ ಓಡಿಹೋಗುತ್ತಿದ್ದೆ ವಿನಾ ಅವರನ್ನು ವಂಚಿಸುವ ಉದ್ದೇಶದಿಂದಲ್ಲ~ ಎಂದು ವಿಚಾರಣೆ ವೇಳೆ ರಾಜೇಶ್ ಹೇಳಿಕೆ ನೀಡಿದ್ದಾನೆ.
ಮೀನಾಕ್ಷಿ, ಶಾಂಭವಿ, ಪ್ರೇಮ, ಸುನಂದಾ ಅವರಿಗೆ ಮಕ್ಕಳಿದ್ದಾರೆ. ಮಲ್ಪೆ ಪೋಲಿಸರು ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ.
ಜಯ ಕರ್ನಾಟಕ ಸಂಘಟನೆ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ದಿವಾಕರ್ ಶೆಟ್ಟಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ದೂರು ನೀಡಲು ಮತ್ತು ಆರೋಪಿ ಬಂಧಿಸಲು ಜಯ ಕರ್ನಾಟಕ ಸಂಘಟನೆ ಸಹಾಯ ಮಾಡಿದೆ ಎಂದು ಮಲ್ಪೆಯ ರೇವತಿ ತಿಳಿಸಿದ್ದಾರೆ.
ಮಡಿಕೇರಿ ವರದಿ: ಮಡಿಕೇರಿ ಸಮೀಪದ ಮಕ್ಕಂದೂರಿನ ಸುನಂದಾ ಅವರನ್ನು 2008ರಲ್ಲಿ ರಾಜೇಶ್ ಮದುವೆಯಾಗಿದ್ದ. ಈ ದಂಪತಿಗೆ 2 ವರ್ಷದ ಗಂಡು ಮಗು ಇದೆ. ರಾಜೇಶನ ಕಪಟತನದ ಬಗ್ಗೆ ಆಕೆಗೆ ಎಂದೂ ಸಂಶಯ ಬಂದಿರಲಿಲ್ಲ. ಆದರೆ ಪೊಲೀಸರು ವಿಚಾರಣೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಬಿ ಬೋರಲಿಂಗಯ್ಯ ಮತ್ತು ಡಿವೈಎಸ್ಪಿ ಡಾ. ಪ್ರಭುದೇವ ಮಾನೆ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಎಸ್.ವಿ. ಗಿರೀಶ್ ಮತ್ತು ಎಸ್ಐ ಲಿಂಗರಾಜು ಅವರ ತಂಡ ಆರೋಪಿಯನ್ನು ಬಂಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.