ಕಲಬುರ್ಗಿ: 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಭಾನುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಿಡುಗಡೆ ಮಾಡಲಾಯಿತು.
ಕಲಬುರ್ಗಿಯ ಐತಿಹಾಸಿಕ ತಾಣ, ಕವಿರಾಜಮಾರ್ಗ ಕೃತಿಯ ಚಿತ್ರಣವನ್ನು ಲಾಂಛನ ಹೊಂದಿದೆ.
ಲಾಂಛನವನ್ನು ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ಬಿ.ಶರತ್ ಅವರು ಸಮ್ಮೇಳನಕ್ಕೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಸಿದ್ಧತೆ ಬಗ್ಗೆ ವಿವರಿಸಿದರು.
ಸಮ್ಮೇಳನದ ಹಿನ್ನೆಲೆಯಲ್ಲಿ ರಚಿಸಲಾಗಿರುವ 16 ಸಮಿತಿಗಳ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಸಕರು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.
ಸಾಹಿತ್ಯ ಸಮ್ಮೇಳನ ಲಾಂಛನದಲ್ಲಿ ಏನೇನಿದೆ?
ಕಲಬುರ್ಗಿಯಲ್ಲಿ ಫೆ.5, 6 ಮತ್ತು 7ರಂದು ನಡೆಯುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ವಿಶಿಷ್ಟತೆಯಿಂದ ಕೂಡಿದೆ. ಕಲ್ಯಾಣ ಕರ್ನಾಟಕದ ಸೊಗಡು, ಸಂಸ್ಕೃತಿ ಮತ್ತು ಹಾಗೂ ಸಾಹಿತ್ಯಿಕ ಮಹತ್ವ ಸಾರುವ ಚಿತ್ರಗಳನ್ನು ಲಾಂಛನದಲ್ಲಿ ಬಳಸಲಾಗಿದೆ. ಇದನ್ನು ಸ್ಥಳೀಯ ಕಲಾವಿದ ಡಾ. ಪಿ.ಪರಶುರಾಮ ವಿನ್ಯಾಸ ಮಾಡಿದ್ದಾರೆ.
ಕನ್ನಡದ ಮೊದಲ ಉಪಲಬ್ಧ ಗ್ರಂಥ ‘ಕವಿರಾಜ ಮಾರ್ಗ’, ಕನ್ನಡಾಂಬೆಯ ಭಾವಚಿತ್ರ, ಜಾನಪದ ಛತ್ರಿ, ಶಾಸನ, ಸೂಫಿ ಸಂತ ಹಜರತ್ ಖಾಜಾ ಬಂದೇ ನವಾಜ ದರ್ಗಾ, ಶರಣಬಸವೇಶ್ವರ ದೇವಸ್ಥಾನ, ಕಲಬುರ್ಗಿ ಕೋಟೆ, ಚರ್ಚ್, ಬೌದ್ಧ ವಿಹಾರ, ಸನ್ನತಿಯ ಶಿಲ್ಪಗಳು, ವಚನಕಾರರ ತಾಳಿಗೆರೆ ಕಟ್ಟು, ತೊಗರಿ ಬೆಳೆ ಚಿತ್ರವನ್ನು ಸಾಂಕೇತಿಕವಾಗಿ ಬಳಸಿಕೊಳ್ಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.