ADVERTISEMENT

ಅಭಿಷೇಕ್‌ಗೆ ಮರಣೋತ್ತರ ಪದವಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2019, 19:17 IST
Last Updated 7 ಡಿಸೆಂಬರ್ 2019, 19:17 IST

ಮೈಸೂರು: ಅಮೆರಿಕದಲ್ಲಿ ಈಚೆಗೆ ಗುಂಡಿನ ದಾಳಿಗೆ ಬಲಿಯಾದ ಮೈಸೂರಿನ ಯುವಕ ಅಭಿಷೇಕ್ ಸುದೇಶ್ ಭಟ್ ಅವರಿಗೆ ಮರಣೋತ್ತರವಾಗಿ ಪದವಿ ಪ್ರದಾನ ಮಾಡಲು ಕ್ಯಾಲಿಫೋರ್ನಿಯಾದ ಸ್ಟೇಟ್ ವಿಶ್ವವಿದ್ಯಾಲಯ ಮುಂದಾಗಿದೆ.

ಸ್ನಾತಕೋತ್ತರ ಪದವಿ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದ್ದ ಅಭಿಷೇಕ್‌ ಒಂದೂವರೆ ವರ್ಷದ ಅವಧಿಯಲ್ಲಿ ಮೂರು ಸೆಮಿಸ್ಟರ್‌ ಪೂರ್ಣಗೊಳಿಸಿದ್ದು, ಕೊನೆಯ ಸೆಮಿಸ್ಟರ್ ಓದುತ್ತಿದ್ದರು. ಈ ಹಿಂದಿನ ಸೆಮಿಸ್ಟರ್‌ಗಳಲ್ಲಿ ಉತ್ತಮ ಸಾಧನೆ ಮಾಡಿರುವುದಕ್ಕೆ ವಿಶ್ವವಿದ್ಯಾಲಯ ಈ ನಿರ್ಧಾರ ಕೈಗೊಂಡಿದೆ.

ಸ್ಯಾನ್ ಬರ್ನಾರ್ಡಿನೊದಲ್ಲಿ ಶುಕ್ರವಾರ ನಡೆದ ಅಭಿಷೇಕ್‌ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ವಿ.ವಿ ಸಿಬ್ಬಂದಿ ಈ ವಿಷಯವನ್ನು ಆತನ ಪೋಷಕರಿಗೆ ತಿಳಿಸಿದ್ದಾರೆ. ಕುಟುಂಬದವರು ಯಾವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದು ಇನ್ನೂ ತಿಳಿದು ಬಂದಿಲ್ಲ ಎಂದು ಸಂಬಂಧಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಅಂತ್ಯಕ್ರಿಯೆ: ‘ಸ್ಯಾನ್‌ ಬರ್ನಾರ್ಡಿನೊದ ಬಾಬ್ಬಿಟ್‌ ಮೆಮೊರಿಯಲ್ ಚಾಪೆಲ್‌ನಲ್ಲಿ ಅಭಿಷೇಕ್‌ ಅಂತ್ಯಕ್ರಿಯೆ ನಡೆದಿದ್ದು, ಸ್ಥಳೀಯ ಮಠವೊಂದರ ಆಗಮಿಕರ ತಂಡ ಧಾರ್ಮಿಕ ವಿಧಿ ವಿಧಾನಗಳನ್ನು ನಿರ್ವಹಿಸಿತು. ಅಲ್ಲಿ ನೆಲೆಸಿರುವ ಕನ್ನಡಿಗರೂ ಭಾಗಿಯಾಗಿದ್ದರು’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.