ADVERTISEMENT

ಶಾಸಕರು–ಬೆಂಬಲಿಗರಿಂದ ಗದ್ದಲ: ತಳ್ಳಾಟದಲ್ಲಿ ಗಾಯಗೊಂಡಿದ್ದ ಸದಸ್ಯೆಗೆ ಗರ್ಭಪಾತ

ಮಹಾಲಿಂಗಪುರ ಪುರಸಭೆ ಚುನಾವಣೆ ವೇಳೆ ಶಾಸಕರು–ಬೆಂಬಲಿಗರಿಂದ ನಡೆದಿದ್ದ ಗದ್ದಲ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 12:07 IST
Last Updated 30 ನವೆಂಬರ್ 2020, 12:07 IST

ಬಾಗಲಕೋಟೆ: ಪುರಸಭೆ ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ವೇಳೆ ಮತದಾನ ಮಾಡಲು ಬಂದಾಗ ಶಾಸಕರು ಹಾಗೂ ಅವರ ಬೆಂಬಲಿಗರಿಂದ ತಳ್ಳಾಟಕ್ಕೆ ತುತ್ತಾಗಿದ್ದ ಮಹಾಲಿಂಗಪುರ ಪುರಸಭೆ ಸದಸ್ಯೆ ಚಾಂದಿನಿ ನಾಯಕ ಅವರಿಗೆ ಗರ್ಭಪಾತ ಆಗಿದೆ.

ತಮ್ಮದೇ ಪಕ್ಷದ ಸದಸ್ಯೆಯನ್ನು ಬಿಜೆಪಿ ಶಾಸಕ ಸಿದ್ದು ಸವದಿ ಹಾಗೂ ಅವರ ಬೆಂಬಲಿಗರ ಗುಂಪು ಆಕೆಯನ್ನು ಹಿಡಿದು–ಎಳೆದಾಡಿ ಅಸಭ್ಯವಾಗಿ ವರ್ತಿಸುವುದು ಈ ವೇಳೆ ಚಾಂದಿನಿ ಮೆಟ್ಟಿಲ ಮೇಲಿನಿಂದ ಉರುಳಿ ಬಿದ್ದಿದ್ದರು. ಆ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

ಚುನಾವಣೆಯಲ್ಲಿ ಅಧ್ಯಕ್ಷೆ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸ್ನೇಹಲ್ ಅಂಗಡಿ ಹಾಗೂ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಸವಿತಾ ಹುರಕಡ್ಲಿ ಸ್ಪರ್ಧಿಸಿದ್ದರು. ಚಾಂದಿನಿ ನಾಯಕ ಸೇರಿದಂತೆ ಇಬ್ಬರು ಪಕ್ಷದ ಅಭ್ಯರ್ಥಿಗಳು ಸವಿತಾ ಅವರನ್ನು ಬೆಂಬಲಿಸಬಹುದುಎಂಬ ಗುಮಾನಿ ಮೇಲೆ ಅವರನ್ನು ಮತದಾನ ಮಾಡದಂತೆ ತಡೆಯಲು ಮುಂದಾದಾಗ ಘಟನೆ ನಡೆದಿತ್ತು. ಇದರಿಂದ ಚಾಂದಿನಿ ನಾಯಕ ಮತದಾನದಿಂದ ವಂಚಿತರಾಗಿದ್ದರು. ಸ್ನೇಹಲ್ ಅಂಗಡಿ ಹಾಗೂ ಸವಿತಾ ಹುರಕಡ್ಲಿ ಅವರಿಗೆ ಸಮ ಮತಗಳು ಬಿದ್ದ ಕಾರಣ ಲಾಟರಿ ಮೂಲಕ ಸ್ನೇಹಲ್ ಅವರನ್ನು ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಗಿತ್ತು.

ADVERTISEMENT

‘ನಾನು ಪಕ್ಷದ ಸದಸ್ಯರಿಗೆ ವಿಪ್ ಕೊಡಲು ಹೋಗಿದ್ದೆ. ಈ ವೇಳೆ ಆದ ನೂಕಾಟ–ತಳ್ಳಾಟದಿಂದ ಸದಸ್ಯೆಯನ್ನು ರಕ್ಷಿಸಿದ್ದೇನೆ ಹೊರತು ಹಲ್ಲೆ ಮಾಡಿಲ್ಲ’ ಎಂದು ಶಾಸಕ ಸಿದ್ದು ಸವದಿ ಸ್ಪಷ್ಟನೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.