ADVERTISEMENT

ಠಾಣೆ ಎದುರು ಡಿಸಿಪಿಗೆ ನಿಂದನೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 15:09 IST
Last Updated 18 ಅಕ್ಟೋಬರ್ 2021, 15:09 IST

ಹುಬ್ಬಳ್ಳಿ: ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಪ್ರಚೋದಿಸಿದ ವ್ಯಕ್ತಿಯನ್ನು ಬಂಧಿಸುವಂತೆ ಆಗ್ರಹಿಸಿ ಹಿಂದೂಪರ ಸಂಘಟನೆಯವರು ಭಾನುವಾರ ರಾತ್ರಿ ನವನಗರ ಪೊಲೀಸ್ ಠಾಣೆ ಎದುರು ಪ್ರತಿಭಟಿಸುವಾಗ ವ್ಯಕ್ತಿಯೊಬ್ಬರು ಡಿಸಿಪಿಯನ್ನು ಬಹಿರಂಗವಾಗಿಯೇ ಅವಾಚ್ಯ ಪದಗಳಿಂದ ನಿಂದಿಸಿದ ವಿಡಿಯೊ ವೈರಲ್‌ ಆಗಿದೆ.

‘ಗಡುವು ಮುಗಿದರೂ ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ. ಏನಂತ ತಿಳಿದುಕೊಂಡಿಲೇ ಡಿಸಿಪಿ; ಹಿಂದೂ ಸಮಾಜವನ್ನು ಏನೂ ಬೇಕಾದರೂ ಮಾಡಿದರೆ ನಡೆಯುತ್ತದೆ ಎಂದುಕೊಂಡಿದ್ದೀಯಾ? ಹಿಂದೆ ಹುಬ್ಬಳ್ಳಿಯಲ್ಲಿ ಪಾಕಿಸ್ತಾನ ಜಿಂದಾಬಾದ್‌ ಎಂದ ಆರೋಪಿಗಳನ್ನು ಠಾಣೆಗೆ ಕರೆದುಕೊಂಡು ಬಂದಿದ್ದರೂ ಆಗಿನ ಕಮಿಷನರ್‌ ಆರ್‌.ದಿಲೀಪ್‌ ವಾಪಸ್‌ ಕಳುಹಿಸಿದ್ದರು. ಆಗ ವಕೀಲರು ಹಾಗೂ ಸಮಾಜ ಒಂದಾಗಿ ಹೋರಾಟ ಮಾಡಿ ದೇಶದ್ರೋಹಿಗಳನ್ನು ಜೈಲಿಗೆ ಹಾಕಿದಂತೆ, ಮತಾಂತರ ಮಾಡುವವರನ್ನೂ ಒಳಗೆ ಹಾಕಿಸ್ತೇವಿ’ ಎನ್ನುವ ಮಾತುಗಳು ವಿಡಿಯೊದಲ್ಲಿವೆ.

‘ಇದುವರೆಗೆ ಆರೋಪಿಯನ್ನು ಬಂಧಿಸಿ ಎನ್ನುವುದಷ್ಟೇ ನಮ್ಮ ಬೇಡಿಕೆಯಾಗಿತ್ತು. ಇನ್ನೂ ವಿಳಂಬವಾದರೆ ಡಿಸಿಪಿಯನ್ನು ಬಂಧಿಸಬೇಕು ಎಂದು ಹೋರಾಟ ಮಾಡಬೇಕಾಗುತ್ತದೆ. ಪೊಲೀಸ್‌ ಇಲಾಖೆಯಲ್ಲಿ ಶೇ 99ರಷ್ಟು ಜನ ಸಿಬ್ಬಂದಿ ಹಿಂದೂಗಳೇ ಇದ್ದು, ಅವರೆಲ್ಲ ಕಾನೂನು ಪಾಲನೆ ಮಾಡುತ್ತಿದ್ದಾರೆ. ಆದರೆ ಮತಾಂತರಿ, ದೇಶದ್ರೋಹಿ ಹಾಗೂ ಸೋನಿಯಾ ಗಾಂಧಿಯ ಚಮಚಾ ಡಿಸಿಪಿ, ಠಾಣೆಗೆ ಸಂಘಟನೆಯ ಕಾರ್ಯಕರ್ತರು ಕರೆದುಕೊಂಡು ಬಂದ ಆರೋಪಿಯನ್ನೇ ವಾಪಸ್‌ ಕಳುಹಿಸಿದ್ದಾನೆ’ ಎಂದು ಏಕವಚನದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಭಾನುವಾರದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಬಿಜೆಪಿ ಮುಖಂಡ ಜಯತೀರ್ಥ ಕಟ್ಟಿ ವಿಡಿಯೊ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ‘ವಿಡಿಯೊದಲ್ಲಿ ಮಾತನಾಡಿದ ವ್ಯಕ್ತಿಯ ಆಕ್ರೋಶದ ಭಾವನೆಗಳು ಅರ್ಥವಾಗುತ್ತವೆ. ಆದರೆ ಆ ವ್ಯಕ್ತಿ ಬಳಸಿದ ಅವಾಚ್ಯ ಪದಗಳಿಗೆ ನಮ್ಮ ಸಹಮತವಿಲ್ಲ’ ಎಂದರು.

ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರ್‌ ಲಾಬೂರಾಮ್‌ ಪ್ರತಿಕ್ರಿಯಿಸಿ, ‘ವಿಡಿಯೊ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.