ಬೆಂಗಳೂರು: ರಾಜ್ಯ ವಿವಿಧ ಇಲಾಖೆಯ ಏಳು ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು, ಸರ್ಕಾರಿ ನೌಕರರು ಆದಾಯವನ್ನೂ ಮೀರಿ ಶೇ 300ರಷ್ಟು ಅಧಿಕ ಆಸ್ತಿ ಸಂಪಾದನೆ ಮಾಡಿರುವುದನ್ನು ಪತ್ತೆ ಹಚ್ಚಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ನಗರ ಮತ್ತು ಗ್ರಾಮಾಂತರ ಯೋಜನೆಗಳ ಜಂಟಿ ನಿರ್ದೇಶಕ ಕೆ.ವಿ.ಜಯರಾಜ್ ಅವರು ಶೇ 98.43 ರಷ್ಟು ಆಸ್ತಿ ಸಂಪಾದಿಸಿದ್ದರೆ, ಕೋಲಾರದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎನ್. ವಿಜಯಕುಮಾರ್ ಶೇ 343 ರಷ್ಟು ಆಸ್ತಿಯನ್ನು ಆದಾಯ ಮೀರಿ ಸಂಪಾದಿಸಿದ್ದಾರೆ.
ಬೆಂಗಳೂರಿನ ಸಹಕಾರ ಸಂಘಗಳ ಜಂಟಿ ನಿಬಂಧಕ ಡಿ. ಪಾಂಡುರಂಗ ಗರಗ ಅವರು ಶೇ 93.41 ರಷ್ಟು, ಧಾರವಾಡದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ(ಎಸಿಎಫ್) ಶ್ರೀನಿವಾಸ್ ಅವರು ಶೇ 143.85 ರಷ್ಟು, ಕೊಪ್ಪಳದ ಕಿಮ್ಸ್ನ ಫಾರ್ಮಾಕಾಲಜಿ ವಿಭಾಗದ ಮುಖ್ಯಸ್ಥ ಶ್ರೀನಿವಾಸ್ ಶೇ 50.38 ಹೆಚ್ಚು ಆಸ್ತಿ ಹೊಂದಿದ್ದಾರೆ.
ಲೋಕೋಪಯೋಗಿ ಇಲಾಖೆಯ ಮಾಗಡಿ ವಿಭಾಗದ ಕಿರಿಯ ಎಂಜಿನಿಯರ್ ಚನ್ನಬಸಪ್ಪ ಅವರ ಬಳಿ ಶೇ 220.01 ರಷ್ಟು, ಧಾರವಾಡದ ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ದೇವರಾಜ್ ಕಲ್ಮೇಶ ಶಿಗ್ಗಾವಿ ಅವರ ಬಳಿ ಶೇ 223.75ರಷ್ಟು ಆದಾಯಕ್ಕೆ ಹೊಂದಾಣಿಯಾಗದ ಆಸ್ತಿ ಇದೆ ಎಂದು ಎಸಿಬಿ ಅಧಿಕಾರಿಗಳು ವಿವರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.