ವಿಧಾನಸೌಧ
ಬೆಂಗಳೂರು: ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ನಿಯಂತ್ರಕರು (ಗ್ರೂಪ್ ‘ಎ’) ಮತ್ತು ಲೆಕ್ಕಪರಿಶೋಧನಾ ಅಧಿಕಾರಿ (ಗ್ರೂಪ್ ‘ಬಿ’) ಹುದ್ದೆಗಳ ನೇಮಕಾತಿಯಲ್ಲೂ ಅಭ್ಯರ್ಥಿಗಳಿಗೆ ಒಂದು ಬಾರಿಗೆ ವಯೋಮಿತಿ ಸಡಿಲಿಸಿ ಅವಕಾಶ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಮನವಿ ಮಾಡಿದ್ದಾರೆ.
ಸಹಾಯಕ ನಿಯಂತ್ರಕರು–43 ಮತ್ತು ಲೆಕ್ಕಪರಿಶೋಧನಾ ಅಧಿಕಾರಿ–54 ಹುದ್ದೆಗಳ ಭರ್ತಿಗೆ ಮಾರ್ಚ್ 1ರಂದು ಕೆಪಿಎಸ್ಸಿ ಅಧಿಸೂಚನೆ ಹೊರಡಿಸಿದೆ. ಇದೇ ಮಾರ್ಚ್ 18ರಿಂದ ಏಪ್ರಿಲ್ 17ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಪೂರ್ವಭಾವಿ ಪರೀಕ್ಷೆ ಜೂನ್ 2ರಂದು ನಡೆಸಲು ತಾತ್ಕಾಲಿಕ ದಿನ ನಿಗದಿಪಡಿಸಲಾಗಿದೆ.
2023–24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ (ಗ್ರೂಪ್ ‘ಎ’ ಮತ್ತು ‘ಬಿ’) 384 ಹುದ್ದೆಗಳಿಗೆ ನೇಮಕಾತಿಗೆ ಎಲ್ಲ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಸಿ ರಾಜ್ಯ ಸರ್ಕಾರ ಅವಕಾಶ ನೀಡಿದೆ. ಸಹಾಯಕ ನಿಯಂತ್ರಕರು ಮತ್ತು ಲೆಕ್ಕಪರಿಶೋಧನಾ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಕೂಡ ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್ಸ್ (ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ) ನಿಯಮಗಳ ಅಡಿಯಲ್ಲಿಯೇ ನಡೆಯುತ್ತಿದೆ.
‘ಸಹಾಯಕ ನಿಯಂತ್ರಕರು ಮತ್ತು ಲೆಕ್ಕಪರಿಶೋಧನಾ ಅಧಿಕಾರಿ ಹುದ್ದೆಗಳಿಗೆ ಕೋವಿಡ್ ಕಾರಣದಿಂದಾಗಿ ನೇಮಕಾತಿ ನಡೆದಿಲ್ಲ. ಹೀಗಾಗಿ ಹುದ್ದೆ ಆಕಾಂಕ್ಷಿಗಳಾಗಿರುವ ಅನೇಕ ಅಭ್ಯರ್ಥಿಗಳು ವಯೋಮಿತಿ ಮೀರಿದ್ದಾರೆ. ಒಂದು ಬಾರಿ ವಯೋಮಿತಿ ಸಡಿಲಿಸಿ ನಮಗೂ ನ್ಯಾಯ ಕೊಡಬೇಕು ಎಂದು ಈ ಅಭ್ಯರ್ಥಿಗಳು ಮನವಿ ಮಾಡಿದ್ದಾರೆ. ಅಭ್ಯರ್ಥಿಗಳ ಮನವಿಯನ್ನು ಪರಿಗಣಿಸಿ ಅವಕಾಶ ಕಲ್ಪಿಸಬೇಕು’ ಎಂದು ಮುಖ್ಯಮಂತ್ರಿಗೆ ಸಲ್ಲಿಸಿರುವ ಮನವಿಯಲ್ಲಿ ಬೋಸರಾಜು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.