ADVERTISEMENT

ಡಾ. ಕಲಬುರ್ಗಿ ಹತ್ಯೆ: ಡಿ. 20ರಿಂದ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 12:16 IST
Last Updated 24 ನವೆಂಬರ್ 2021, 12:16 IST
ಧಾರವಾಡದ ಜಿಲ್ಲಾ ನ್ಯಾಯಾಲಯದಲ್ಲಿ ಬಧವಾರ ನಡೆದ ವಿಚಾರಣ ನಂತರ ಆರೋಪಿಗಳನ್ನು ಪೊಲೀಸರು ಹೊರಕ್ಕೆ ಕರೆತಂದರು
ಧಾರವಾಡದ ಜಿಲ್ಲಾ ನ್ಯಾಯಾಲಯದಲ್ಲಿ ಬಧವಾರ ನಡೆದ ವಿಚಾರಣ ನಂತರ ಆರೋಪಿಗಳನ್ನು ಪೊಲೀಸರು ಹೊರಕ್ಕೆ ಕರೆತಂದರು   

ಧಾರವಾಡ: ಹಿರಿಯ ಸಂಶೋಧಕ ಡಾ. ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನುಇಲ್ಲಿನ 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಡಿ. 20 ಹಾಗೂ 21ಕ್ಕೆ ನಿಗದಿಪಡಿಸಿ ಬುಧವಾರ ಆದೇಶಿಸಿತು.

ಪ್ರಕರಣದ ಆರು ಆರೋಪಿಗಳಲ್ಲಿ ಧಾರವಾಡ ಕೇಂದ್ರ ಕಾರಾಗೃಹದಲ್ಲಿದ್ದ ಪ್ರವೀಣ ಚತರು ಹಾಗೂ ಮುಂಬೈನ ಆರ್ಥರ್‌ ರಸ್ತೆ ಜೈಲಿನಲ್ಲಿದ್ದ ಅಮಿತ ಬದ್ದಿ, ಗಣೇಶ ಮಿಸ್ಕಿನ್ ಹಾಗೂ ವಾಸುದೇವ ಸೂರ್ಯವಂಶಿಯನ್ನು ನ್ಯಾಯಾಲಯಕ್ಕೆ ಭಿಗಿ ಭದ್ರತೆಯಲ್ಲಿ ಕರೆತರಲಾಯಿತು.

ಪ್ರಕರಣದ ವಿಚಾರಣೆಯನ್ನು ಧಾರವಾಡದಲ್ಲೇ ನಡೆಸುವಂತೆ ಆರೋಪಿಗಳು ನ್ಯಾಯಾಲಯವನ್ನು ಕೇಳಿಕೊಂಡರು. ಜತೆಗೆ ತಮ್ಮನ್ನು ಭೇಟಿಯಾಗಲು ಬಂದ ಕುಟುಂಬದವರು ಹಾಗೂ ವಕೀಲರೊಂದಿಗೆ ಮಾತನಾಡಲು ಅವಕಾಶ ಕೋರಿದರು.ಇವುಗಳಲ್ಲಿ ಭೇಟಿಯ ಕೋರಿಕೆಯನ್ನು ಮಾನ್ಯ ಮಾಡಿದ ನ್ಯಾಯಾಧೀಶರು, ನ್ಯಾಯಾಲಯದ ಆವರಣದಲ್ಲೇ ಭೇಟಿಗೆ ಅವಕಾಶ ನೀಡಿದರು.

ADVERTISEMENT

ವಿಚಾರಣೆ ಸಂದರ್ಭದಲ್ಲಿ ಮರಾಠಿ ಹಾಗೂ ಹಿಂದಿಯಲ್ಲಿ ಮಾತನಾಡುತ್ತಿದ್ದ ಆರೋಪಿಗಳ ವಿರುದ್ಧ ನ್ಯಾಯಾಧೀಶೆ ಪಂಚಾಕ್ಷರಿ ಅವರು ಗರಂ ಆದರು. ಕರ್ನಾಟಕದವರಾಗಿದ್ದು ಕನ್ನಡದಲ್ಲಿ ಮಾತನಾಡಿ ಎಂದು ತಾಕೀತು ಮಾಡಿದರು. ಆಗ ಆರೋಪಿಗಳು ಕನ್ನಡದಲ್ಲೇ ಉತ್ತರಿಸಿದರು.

ನ್ಯಾಯಾಲಯದಿಂದ ಹೊರಬಂದ ಆರೋಪಿಗಳು, ’ನಾವು ಅಮಾಯಕರು. ಎಸ್‌ಐಟಿ ಅಧಿಕಾರಿಗಳು ನಮ್ಮನ್ನು ಇದರಲ್ಲಿ ಸಿಲುಕಿಸಿದ್ದಾರೆ. ಪ್ರಜಾಪ್ರಭುತ್ವದ ಮೇಲೆ ನಮಗೆ ನಂಬಿಕೆ ಇದೆ. ನಾವೆಲ್ಲರೂ ಆರೋಪಮುಕ್ತರಾಗಿ ಹೊರಬರುತ್ತೇವೆ‘ ಎಂದು ಕೂಗಿದರು.

ಮಹಾರಾಷ್ಟ್ರದ ವಿಚಾರವಾದಿಗಳಾದ ಗೋವಿಂದ ಪಾನ್ಸರೆ ಮತ್ತು ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಮುಂಬೈನ ಕೇಂದ್ರ ಕಾರಾಗೃಹಕ್ಕೆ ಮರಳಿಸುವಂತೆ ಅನುಮತಿ ಕೋರಿದ ಅರ್ಜಿಯೂ ನ್ಯಾಯಾಲಯಕ್ಕೆ ಸಲ್ಲಿಕೆಯಾಯಿತು. ಪ್ರಕರಣದ ವಿಚಾರಣೆಯನ್ನು ಶೀಘ್ರದಲ್ಲಿ ನಡೆಸಬೇಕು ಎಂಬ ಹೈಕೋರ್ಟ್‌ ಸೂಚನೆ ಹಿನ್ನೆಲೆಯಲ್ಲಿ ವಿಶೇಷ ಅಭಿಯೋಜಕರನ್ನೂ ಸರ್ಕಾರ ನೇಮಕ ಮಾಡಿದೆ.

ಡಿ. 20 ಹಾಗೂ 21ರಂದು ವಿಚಾರಣೆ ನಡೆಸುವುದಾಗಿ ತಿಳಿಸಿ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.