ಬೆಂಗಳೂರು: 'ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಕಾರಿ ಬರಹ ಪ್ರಕಟಿಸಿದ್ದಾರೆ’ ಎಂದ ಆರೋಪದಡಿ ಬಂಧಿಸಲಾಗಿರುವ ನಟ ಎ. ಚೇತನ್ ಕುಮಾರ್ ಅವರಿಗೆ ಶುಕ್ರವಾರ ಜಾಮೀನು ಮಂಜೂರಾಗಿದೆ.
‘ಜಾತಿ, ಧರ್ಮ ಹಾಗೂ ಎರಡು ಗುಂಪಿನ ನಡುವೆ ದ್ವೇಷ ಉಂಟು ಮಾಡುವ ಹೇಳಿಕೆ ಪ್ರಚುರಪಡಿಸಿದ (ಐಪಿಸಿ 505 (2) ಹಾಗೂ ಅಪರಾಧ ಕೃತ್ಯ ಕೈಗೊಳ್ಳಲು ಪ್ರಚೋದನೆ (ಐಪಿಸಿ 504) ನೀಡಿದ್ದಾರೆ’ ಎಂಬ ಆರೋಪದಡಿ ಶೇಷಾದ್ರಿಪುರ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದರು.
ಚೇತನ್ ಅವರನ್ನು ಫೆ. 22ರಂದು ಬಂಧಿಸಿದ್ದ ಪೊಲೀಸರು, ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು. 14 ದಿನಗಳವರೆಗೆ ಚೇತನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಚೇತನ್ ಅವರಿಗೆ ಜಾಮೀನು ಮಂಜೂರು ಮಾಡುವಂತೆ ಕೋರಿ 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ್ದ ನ್ಯಾಯಾಲಯ, ‘ಇಬ್ಬರು ಸರ್ಕಾರಿ ನೌಕರರ ಶ್ಯೂರಿಟಿ ನೀಡಬೇಕು. ತನಿಖಾಧಿಕಾರಿ ತನಿಖೆಗೆ ಸಹಕರಿಸಬೇಕು. ನ್ಯಾಯಾಲಯದ ಮುಂದಿನ ವಿಚಾರಣೆಗಳಿಗೆ ಹಾಜರಾಗಬೇಕು’ ಎಂಬ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.