ಬೆಂಗಳೂರು: ಬೇಡ ಜಂಗಮ ಜಾತಿಯ ಹೆಸರಿನಲ್ಲಿ ಇತರ ಜಾತಿಯ ಜನರು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ವಂಚಿಸುತ್ತಿರುವ ಕುರಿತು ಪರಿಶೀಲನೆ ನಡೆಸಲು ಕರ್ನಾಟಕ ವಿಧಾನಮಂಡಲದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿ ಬುಧವಾರ ನಡೆಸುತ್ತಿದ್ದ ಸಭೆಗೆ ನುಗ್ಗಿದ ಧಾರವಾಡದ ವಕೀಲ ಬಿ.ಡಿ. ಹಿರೇಮಠ, ಶಾಸಕರು ಹಾಗೂ ಅಧಿಕಾರಿಗಳಿಗೆ ಧಮಕಿ ಹಾಕಿದ್ದಾರೆ.
ಸಮಿತಿಯ ಅಧ್ಯಕ್ಷರಾಗಿರುವ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಶಾಸಕರ ಭವನ -5ರ ಮೊದಲನೇ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಯುತ್ತಿತ್ತು. ಹೊನ್ನಾಳಿ ಶಾಸಕ ಎಂಪಿ. ರೇಣುಕಾಚಾರ್ಯ ಅವರ ಮಗಳು ಬೇಡ ಜಂಗಮ ಜಾತಿಯ ಪ್ರಮಾಣಪತ್ರ ಪಡೆದಿರುವುದೂ ಸೇರಿದಂತೆ ಹಲವು ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಬೇಕಿತ್ತು.
ದಿಢೀರನೆ ಸಭಾಂಗಣಕ್ಕೆ ನುಗ್ಗಿದ ವಕೀಲ ಹಿರೇಮಠ, ಏನು ಮಾಡ್ಕೋತೀರೋ ಮಾಡ್ಕೊಳ್ಳಿ, ನಿಮ್ಮನ್ನು ನೋಡ್ಕೋತೀನಿ ಎಂದು ಅಲ್ಲಿದ್ದ ಶಾಸಕರು ಮತ್ತು ಅಧಿಕಾರಿಗಳನ್ನುದ್ದೇಶಿಸಿ ಬೆದರಿಕೆ ಹಾಕಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ಹಿರೇಮಠ ಅವರನ್ನು ಹೊರಕ್ಕೆ ಕರೆತಂದಿದ್ದಾರೆ. ಶಾಸಕರ ಭವನದ ಮೊಗಸಾಲೆಯಲ್ಲೇ ಕುಳಿತು ಕೂಗಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿ.ಡಿ. ಹಿರೇಮಠ ಅವರು ವಿಧಾನಮಂಡಲದ ಸಮಿತಿಯ ಸಭೆ ನಡೆಯುತ್ತಿದ್ದ ಸ್ಥಳದಲ್ಲಿ ಗಲಾಟೆ ಮಾಡುತ್ತಿರುವ ಫೋಟೊ, ಮತ್ತು ಆಡಿಯೊ ತುಣುಕುಗಳು ಲಭ್ಯವಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.