ಬೆಂಗಳೂರು: ಯುದ್ಧವಿಮಾನ ಹಾಗೂ ಹೆಲಿಕಾಪ್ಟರ್ಗಳ ಉತ್ಪಾದನೆಯ ಬಹುಪಾಲು ಬೆಂಗಳೂರಿನಲ್ಲೇ ಉತ್ಪಾದನೆಯಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ-2021ಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, "ಯುದ್ಧವಿಮಾನ ಹಾಗೂ ಹೆಲಿಕಾಪ್ಟರ್ ಗಳ ಉತ್ಪಾದನೆಯ ಶೇ 65ರಷ್ಟು ಹಾಗೂ ರಕ್ಷಣಾ ಪರಿಕರ ಉತ್ಪಾದನೆಯಲ್ಲಿ ಶೇ 67ರಷ್ಟು ಬೆಂಗಳೂರಿನಲ್ಲಿ ಆಗುತ್ತಿದೆ.ದೇವನಹಳ್ಳಿ ಯಲ್ಲಿ ಸ್ಥಾಪನೆ ಆಗುತ್ತಿರುವ ವೈಮಾಂತರಿಕ್ಷ ಪಾರ್ಡ್ 10,500 ಉದ್ಯೋಗ ಸೃಷ್ಟಿಸಲು ನೆರವಾಗುತ್ತದೆ' ಎಂದರು.
ಏರೋ ಇಂಡಿಯಾ 2021 ಚಾಲನೆ ವೇಳೆ ರಾಷ್ಟ್ರಧ್ವಜ, ಭಾರತೀಯ ವಾಯು ಸೇನೆ ಹಾಗೂ ಏರೋ ಇಂಡಿಯಾ 2021 ರ ಧ್ವಜ ಹೊತ್ತ ಎಲ್ಯುಹೆಚ್ ಹೆಲಿಕಾಪ್ಟರ್ಗಳು ಮೊದಲು ಪ್ರದರ್ಶನ ನೀಡಿದವು.
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ರಾಜ್ಯದ ಗೃಹಸಚಿವ ಬಸವರಾಜ ಬೊಮ್ಮಾಯಿ, ಭಾರತದ ಮೂರೂ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ರಕ್ಷಣಾ ಪಡೆಯ ಮುಖ್ಯಸ್ಥ ಎಂ.ಎಂ.ನರವಣೆ, ವಾಯುಪಡೆಯ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಬಧೋರಿಯ, ನೌಕಾಪಡೆಯ ಪಡೆಯ ಮುಖ್ಯಸ್ಥ ಅಡ್ಮಿರಲ್ ಕರಮ್ ಬೀರ್ ಸಿಂಗ್, ಕೇಂದ್ರ ರಕ್ಷಣಾ ಇಲಾಖೆ ಕಾರ್ಯದರ್ಶಿ ರಾಜ್ ಕುಮಾರ್, ವಾಯುಯಾನ ಇಲಾಖೆ ಕಾರ್ಯದರ್ಶಿ ಪ್ರದೀಪ್ ಸಿಂಗ್ ಖರೋಲಾ ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಉಪಸ್ಥಿತರಿದ್ದರು.
ಶೋ ಹಿನ್ನೆಲೆಯಲ್ಲಿ ಯಲಹಂಕ ಸುತ್ತಮುತ್ತದ ಪ್ರದೇಶಗಳಲ್ಲಿ ಸರಕು ಮತ್ತು ಭಾರಿ ವಾಹನಗಳ ಪ್ರವೇಶಗಳನ್ನು ನಿಷೇಧಿಸಲಾಗಿದೆ. ಏರ್ ಶೋ ಪಾಸ್ ಹೊಂದಿರುವ ವಾಹನಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದ್ದು, ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.