ಬೆಳಗಾವಿ: ಬಸವಕಲ್ಯಾಣ ಹಾಗೂ, ಮಸ್ಕಿ ವಿಧಾನಸಭಾ ಕ್ಷೇತ್ರ ಮತ್ತುಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನಮ್ಮ ಕಾರ್ಯತಂತ್ರ ಏನು ಎನ್ನುವುದು ಫಲಿತಾಂಶ ಬಂದ ಬಳಿಕ ತಿಳಿಯಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಮೂರು ಉಪ ಚುನಾವಣೆಯಲ್ಲೂ ಗೆಲವು ಸಾಧಿಸಲು ರಾಜ್ಯದ ಮುಖಂಡರು ಸೇರಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ’ಎಂದರು.
‘ಪಕ್ಷ ನನಗೆ ಮಹತ್ವದ ಜವಾಬ್ದಾರಿ ನೀಡಿದೆ. ಪಕ್ಷ ಕೊಟ್ಟಿರುವ ಹುದ್ದೆಯನ್ನು ಕಾರ್ಯಕರ್ತರ ಮಧ್ಯೆ ಇದ್ದು, ಶ್ರದ್ಧೆಯಿಂದ ಪಕ್ಷ ಕಟ್ಟುವ ಕಾರ್ಯ ಮಾಡುತ್ತಿದ್ದೇನೆ. ನಾನು ಮಾಡುತ್ತಿರುವ ಕೆಲಸದಲ್ಲಿ ನನಗೆ ಹೆಮ್ಮೆ ಇದೆ’ಎಂದರು.
‘ಯಡಿಯೂರಪ್ಪ ಅವರು ಸಂಪೂರ್ಣ ಆಡಳಿತವನ್ನು ಪೂರ್ಣಗೊಳಿಸುತ್ತಾರೆ’ ಎಂದು ರಾಜ್ಯ ಘಟಕ ಅಧ್ಯಕ್ಷರು ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. ಅದರ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ ಎಂದರು.
‘ಸಿದ್ದರಾಮಯ್ಯ ಅವರು ಆಡಳಿತದಲ್ಲಿದ್ದಾಗ ಜನರ ಸಂಕಷ್ಟಕ್ಕೆ ಸ್ಪಂದನೆ ಮಾಡಿದಿದ್ದರೆ, ಈಗ ನಮ್ಮ ಸರ್ಕಾರದ ಬಗ್ಗೆ ಹಗುರವಾಗಿ ಹೇಳಿಕೆ ನೀಡುತ್ತಿರಲಿಲ್ಲ. ತಮ್ಮ ಸೋಲನ್ನು ಮರೆ ಮಾಚಿಕೊಳ್ಳಲು ಇಂತಹ ಹೇಳಿಕೆ ನೀಡುತ್ತಿದ್ದಾರೆ’ಎಂದು ಟೀಕಿಸಿದರು.
‘ಪಕ್ಷದ ಕಾರ್ಯಕರ್ತರನ್ನು ಗುರುತಿಸಿ ನಿಗಮ ಮಂಡಳಿಗಳಿಗೆ ಹುದ್ದೆ ನೀಡಿದ್ದಾರೆ. ಇದರಲ್ಲಿ ಮೂಲ ಬಿಜೆಪಿ ಅಥವಾಕೆಜೆಪಿಯಿಂದ ಬಂದವರು ಎಂದೇನಿಲ್ಲ’ಎಂದು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.