ಬೆಂಗಳೂರು: ಪಿ.ಯು ಓದುವಾಗಲೇ ಮದುವೆಯಾಗಿದ್ದರೂ, ಓದುವ ಹಂಬಲ ಮತ್ತು ಪತಿಯ ಪ್ರೋತ್ಸಾಹದೊಂದಿಗೆ ವ್ಯಾಸಂಗ ಮುಂದುವರಿಸಿದ ಮಂಡ್ಯದ ಶೀಲಾ ಪಿ.ಎಸ್., ಬಿ.ಟೆಕ್ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ 54ನೇ ಘಟಿಕೋತ್ಸವದಲ್ಲಿ ಅವರು ಶನಿವಾರ ಚಿನ್ನದ ಪದಕದೊಂದಿಗೆ ಪದವಿ ಪಡೆದರು.
‘ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲ್ಲೂಕಿನ ಪಿಡಿಜಿ ಕೊಪ್ಪಲು ನಮ್ಮೂರು. ನಾನು ಪ್ರಥಮ ಪಿ.ಯು ತರಗತಿಯಲ್ಲಿದ್ದಾಗಲೇ ತಂದೆಯನ್ನು ಕಳೆದುಕೊಂಡೆ. ದ್ವಿತೀಯ ಪಿ.ಯುದಲ್ಲಿದ್ದಾಗ ಮದುವೆ ಮಾಡಿಸಿದರು. ಆದರೆ, ನನಗೆ ಆಹಾರ ತಂತ್ರಜ್ಞಾನದಲ್ಲಿ ವ್ಯಾಸಂಗ ಮುಂದುವರಿಸುವ ಆಸಕ್ತಿ ಇತ್ತು. ಇದನ್ನು ಗಮನಿಸಿದ ಪತಿ ಪಿ.ಎಸ್. ರೋಹಿತ್ ಓದು ಮುಂದುವರಿಸಲು ಪ್ರೋತ್ಸಾಹ ನೀಡಿದರು. ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯವನ್ನು ಹಾಸನದ ಕೃಷಿ ಕಾಲೇಜಿನಲ್ಲಿ ಮಾತ್ರ ಬೋಧಿಸುವುದರಿಂದ ಅಲ್ಲಿ ಪ್ರವೇಶ ಪಡೆದೆ’ ಎಂದು ಶೀಲಾ ಹೇಳಿದರು.
‘ಪತಿ ಟೈಲರ್ ಆಗಿ ಕೆ.ಆರ್. ಪೇಟೆಯಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಹಾಸನದಲ್ಲಿ ಹಾಸ್ಟೆಲ್ನಲ್ಲಿ ಇದ್ದುಕೊಂಡೆ ನಾಲ್ಕು ವರ್ಷ ಓದಿದೆ. ಆಸಕ್ತಿ ಇದ್ದುದರಿಂದ ಓದುವುದು ಕಷ್ಟವಾಗಲಿಲ್ಲ. ಸಹಪಾಠಿಗಳೊಂದಿಗೆ ಹೆಚ್ಚು ಚರ್ಚೆ ನಡೆಸುತ್ತಿದ್ದೆ’ ಎಂದು ಅವರು ಹೇಳಿದರು.
‘ಪದವಿ ಕಲಿಕೆ ವೇಳೆ ದೆಹಲಿಯ ಎಫ್ಎಸ್ಎಸ್ಎಐನಲ್ಲಿ ಮೂರು ತಿಂಗಳು ಇಂಟರ್ನ್ಶಿಪ್ ಮಾಡಿದ್ದೇನೆ. ಈಗ ಮೈಸೂರಿನ ಸಿಎಫ್ಟಿಆರ್ಐನಲ್ಲಿ ಆಹಾರ ವಿಜ್ಞಾನ–ತಂತ್ರಜ್ಞಾನ ವಿಷಯದಲ್ಲಿ ಎಂಎಸ್ಸಿ ಮಾಡುತ್ತಿದ್ದೇನೆ. ಇದೇ ಕ್ಷೇತ್ರದಲ್ಲಿ ಉನ್ನತ ಹುದ್ದೆಗೇರುವ ಗುರಿ ಹೊಂದಿದ್ದೇನೆ. ಜೆಆರ್ಎಫ್ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ್ಯಾಂಕ್ ಗಳಿಸಿದ್ದೇನೆ’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.