ADVERTISEMENT

ಮೌಲ್ಯವರ್ಧಿಸಿದರಷ್ಟೇ ಕೃಷಿ ಲಾಭದಾಯಕ: ಮುಖ್ಯಮಂತ್ರಿ ಸಿದ್ದರಾಮಯ್ಯ

‘ಉತ್ಪಾದನೋತ್ತರ ಕೃಷಿ-ರೈತರ ಸಬಲೀಕರಣ’ ವಾಣಿಜ್ಯ ಮೇಳ- ಸಿ.ಎಂ ಅಭಿಮತ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 16:03 IST
Last Updated 6 ಫೆಬ್ರುವರಿ 2026, 16:03 IST
ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಸಿದ್ದರಾಮಯ್ಯ ಅವರು ಸಾವಯವ ಬೆಲ್ಲವನ್ನು ಪರಿಶೀಲಿಸಿದರೆ, ಎನ್. ಚಲುವರಾಯಸ್ವಾಮಿ ಬೆಲ್ಲವನ್ನು ಸವಿದರು –ಪ್ರಜಾವಾಣಿ ಚಿತ್ರ
ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಸಿದ್ದರಾಮಯ್ಯ ಅವರು ಸಾವಯವ ಬೆಲ್ಲವನ್ನು ಪರಿಶೀಲಿಸಿದರೆ, ಎನ್. ಚಲುವರಾಯಸ್ವಾಮಿ ಬೆಲ್ಲವನ್ನು ಸವಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಿಂದ ಮಾತ್ರವೇ ಕೃಷಿಯನ್ನು ಲಾಭದಾಯಕ ಆಗಿಸಬಹುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕೃಷಿ ಇಲಾಖೆಯು ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿರುವ ‘ಉತ್ಪಾದನೋತ್ತರ ಕೃಷಿ ಹಾಗೂ ರೈತರ ಸಬಲೀಕರಣ’ ಪರಿಕಲ್ಪನೆಯ ಅಂತರರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಶುಕ್ರವಾರ ರೈತ ಸಾಧಕರಿಗೆ ‘ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿ ಮತ್ತು ಕೃಷಿ ಪ್ರಶಸ್ತಿ’ಗಳನ್ನು ಪ್ರದಾನ ಮಾಡಿ ಅವರು ಮಾತನಾಡಿದರು.

‘ಈ ಹಿಂದೆ ನಮ್ಮ ರೈತರು ರಾಗಿ, ಭತ್ತ, ಕಬ್ಬು ಬೆಳೆಯುತ್ತಿದ್ದರು. ಅವನ್ನು ಮಾರಾಟ ಮಾಡುತ್ತಿದ್ದರು. ಅವರು ಬೆಳೆದ ಬೆಳೆಯ ಲಾಭ ಅವರಿಗೆ ಸಿಗುತ್ತಲೇ ಇರಲಿಲ್ಲ. ಬದಲಿಗೆ ಮಧ್ಯವರ್ತಿಗಳ ಪಾಲಾಗುತ್ತಿತ್ತು. ಕೃಷಿಯನ್ನೂ ಹೇಗೆ ಲಾಭದಾಯಕ ಮಾಡಬಹುದು ಎಂಬುದನ್ನು ಹಲವು ರೈತರು ಸಾಧಿಸಿ ತೋರಿಸಿದ್ದಾರೆ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಹೇಗೆ ಮಾಡಬೇಕು ಎಂಬುದನ್ನು ಸಾಕ್ಷೀಕರಿಸಿರುವ ಹಲವು ರೈತ–ಉದ್ಯಮಿಗಳು ವಸ್ತು ಪ್ರದರ್ಶನದಲ್ಲಿ ಮಳಿಗೆಗಳನ್ನು ಹಾಕಿದ್ದಾರೆ. ಅದನ್ನು ರೈತರು ಸ್ಫೂರ್ತಿಯನ್ನಾಗಿ ತೆಗೆದುಕೊಳ್ಳಬೇಕು’ ಎಂದರು.

ADVERTISEMENT

‘ದಶಕಗಳ ಹಿಂದೆ ದೇಶದ ಶೇ 80ರಷ್ಟು ಜನರು ಕೃಷಿಯಲ್ಲಿ ತೊಡಗಿಕೊಂಡಿದ್ದರು. ಈಗ ಆ ಪ್ರಮಾಣ ಶೇ 62ಕ್ಕೆ ಕುಸಿದಿದೆ. 140 ಕೋಟಿಯಷ್ಟಿರುವ ನಮ್ಮ ಜನರಿಗೆ ಬೇಕಾಗುವಷ್ಟು ಆಹಾರ ಧಾನ್ಯಗಳನ್ನು ಉತ್ಪಾದಿಸಲಾಗುತ್ತಿಲ್ಲ. ಹೀಗಾಗಿ ಕೃಷಿಯಲ್ಲಿ ಉದ್ಯಮಿಗಳಾಗಲು ಸಾಕಷ್ಟು ಅವಕಾಶಗಳಿವೆ. ಆ ನಿಟ್ಟಿನಲ್ಲಿ ಯುವಜನರು ಯೋಚನೆ ಮಾಡಬೇಕು. ಹೊಸತಲೆಮಾರಿನ ಅಗತ್ಯಗಳಿಗೆ ಕೃಷಿಯನ್ನು ಒಗ್ಗಿಸಿಕೊಳ್ಳಬೇಕು ಮತ್ತು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯ ಸಾಧ್ಯತೆಗಳನ್ನು ಪರಿಶೀಲಿಸಬೇಕು’ ಎಂದು ಕರೆ ನೀಡಿದರು.

‘ಬೆಳೆ ವಿಮೆ ಯೋಜನೆಗೆ ನೋಂದಣಿ ಮಾಡಿಸುವಲ್ಲಿ ನಮ್ಮ ರಾಜ್ಯವು ದೇಶದಲ್ಲೇ ಎರಡನೆಯ ಸ್ಥಾನದಲ್ಲಿದೆ. ನಮ್ಮ ರೈತರಿಗೆ ₹6,000 ಕೋಟಿ ಮೊತ್ತದ ವಿಮೆ ಪರಿಹಾರವನ್ನು ಒದಗಿಸಲಾಗಿದೆ. ರೈತರ ಬದುಕು ಹಸನಾಗಬೇಕಾದರೆ, ನೀವು ನಮ್ಮ ಕೈ ಬಲಪಡಿಸಬೇಕು’ ಎಂದರು.

ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಕೆಪೆಕ್‌ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಉಪಸ್ಥಿತರಿದ್ದರು.

‘ನರೇಗಾ ಮರು ಜಾರಿಗೆ ಒತ್ತಾಯಿಸಿ’

‘ಕೇಂದ್ರದ ಬಿಜೆಪಿ ಸರ್ಕಾರವು ನರೇಗಾವನ್ನು ರದ್ದುಪಡಿಸಿ ವಿಬಿ ಜಿ–ರಾಮ್‌ಜಿ ಜಾರಿಗೆ ತಂದಿದೆ. ಇದರಿಂದ ಕೃಷಿ ಕಾರ್ಮಿಕರ ಉದ್ಯೋಗ ಇಲ್ಲವಾಗಲಿದೆ. ಇದರ ವಿರುದ್ಧ ರಾಜ್ಯ ರೈತರೆಲ್ಲರೂ ಒಗ್ಗೂಡಬೇಕು. ನರೇಗಾ ಮರು ಜಾರಿಗೆ ಒತ್ತಾಯಿಸಬೇಕು’ ಎಂದು ಸಿದ್ದರಾಮಯ್ಯ ಕರೆ ನೀಡಿದರು. ‘ರಾಜ್ಯಗಳಿಗೆ ಅನುದಾನ ಕಡಿತ ಮಾಡುವ ವಿಬಿ ಜಿ–ರಾಮ್‌ಜಿ ಯೋಜನೆಯನ್ನು ಯಾವ ರಾಜ್ಯ ಸರ್ಕಾರಗಳೂ ಒ‍ಪ್ಪಿಕೊಳ್ಳಲು ಸಾಧ್ಯವಿಲ್ಲ. ರಾಜ್ಯಗಳ ಒಪ್ಪಿಗೆ ಇಲ್ಲದೆಯೇ ಕೇಂದ್ರದ ಬಿಜೆಪಿ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ನಿಮ್ಮ ಗ್ರಾಮಗಳ ವ್ಯಾಪ್ತಿಯಲ್ಲಿ ಯಾವ ಕಾಮಗಾರಿ ಆಗಬೇಕು ಎಂಬುದರ ಕುರಿತಾಗಿ ಗ್ರಾಮ ಪಂಚಾಯತಿಗಳು ನಿರ್ಧಾರ ತೆಗೆದುಕೊಳ್ಳಬಹುದಿತ್ತು. ಈಗ ಅದನ್ನು ಕೇಂದ್ರ ಸರ್ಕಾರವೇ ನಿರ್ಧರಿಸಲಿದೆ. ಉದ್ಯೋಗ ಇನ್ನೆಲ್ಲಿಂದ ಸಿಗಲಿದೆ. ಈ ಬಗ್ಗೆ ರೈತರು ಕೃಷಿ ಕಾರ್ಮಿಕರು ಸಂಘಟಿತರಾಗಿ ಹೋರಾಡಬೇಕಾಗಿದೆ’ ಎಂದರು.

‘ಮಾರುಕಟ್ಟೆ ಕಂಡುಕೊಂಡರಷ್ಟೇ ಲಾಭ’

‘ರೈತರು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿಕೊಂಡರೂ ಮಾರುಕಟ್ಟೆ ರೂಪಿಸಿಕೊಳ್ಳದೇ ಇದ್ದರೆ ಉಪಯೋಗವಿಲ್ಲ’ ಎಂದು ಮಂಡ್ಯದ ಗೌತಮ್ ಹೇಳಿದರು. ‘ನಾವು ಕೃಷಿ ಸಲಕರಣೆ ಮತ್ತು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುತ್ತೇವೆ. ರೈತರು ಬೆಳೆದ ಕಬ್ಬಿನಿಂದ ಸಾವಯವ ರೀತಿಯಲ್ಲಿ ತಯಾರಿಸಿದ ಬೆಲ್ಲವನ್ನು ಮಾರುತ್ತೇವೆ. ಅದನ್ನು ಮೊದಲು ಕೆಲವು ಪ್ರತಿಷ್ಠಿತ ಇ–ಕಾಮರ್ಸ್‌ ಕಂಪನಿಗಳು 1 ಕೆ.ಜಿಗೆ ₹80ರ ದರದಲ್ಲಿ ಖರೀದಿಸುತ್ತಿದ್ದವು. ಅವನ್ನೇ ಆನ್‌ಲೈನ್‌ನಲ್ಲಿ ₹280–₹300ಕ್ಕೆ ಮಾರಾಟ ಮಾಡುತ್ತಿದ್ದವು. ರೈತನಿಗೆ ಕೃಷಿ ಉತ್ಪನ್ನಕ್ಕೆ ಮೌಲ್ಯವರ್ಧನೆ ಮಾಡಿದವನಿಗೆ ಮಾಡುವ ಮೋಸವಲ್ಲವೇ ಇದು’ ಎಂದು ಪ್ರಶ್ನಿಸಿದರು. ‘ಮಧ್ಯವರ್ತಿಗಳಿಗೆ ಲಾಭ ಹೋಗುವುದನ್ನು ತಪ್ಪಿಸಲು ನಾವೇ ಮಾರುಕಟ್ಟೆ ಕಂಡುಕೊಳ್ಳುತ್ತಿದ್ದೇವೆ. ಆನ್‌ಲೈನ್‌ನಲ್ಲಿ ಪ್ರಚಾರ ಮಾಡಿ ಗ್ರಾಹಕರನ್ನು ಹುಡುಕುತ್ತೇವೆ. ₹100ಕ್ಕೆ 1 ಕೆ.ಜಿ ಸಾವಯವ ಬೆಲ್ಲ ಮಾರುತ್ತಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.