ಮುಂಬೈ: ದೀಪಾವಳಿಗೆ ಬೋನಸ್ ನೀಡದ ಕಾರಣಕ್ಕೆ ಏರ್ ಇಂಡಿಯಾ ನೌಕರರ ಗುಂಪೊಂದು ಗುರುವಾರ ದಿಢೀರ್ ಮುಷ್ಕರ ನಡೆಸಿತು. ಇದರಿಂದ, 10 ದೇಶೀಯ ಮತ್ತು ಮೂರು ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ಮೂರು ಗಂಟೆ ವಿಳಂಬವಾಯಿತು ಎಂದು ಏರ್ಲೈನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಏರ್ ಇಂಡಿಯಾದ ಅಂಗಸಂಸ್ಥೆಯಾದ ಏರ್ ಟ್ರಾನ್ಸ್ಪೋರ್ಟ್ ಸರ್ವೀಸಸ್ ಲಿಮಿಟೆಡ್ನ (ಎಐಎಟಿಎಸ್ಎಲ್) ನಿಲ್ದಾಣ ಸಿಬ್ಬಂದಿಯು ಪ್ರಯಾಣಿಕರನ್ನು ಪರೀಕ್ಷಿಸುವುದು, ಬ್ಯಾಗ್, ಸರಕು ಲೋಡ್ ಮಾಡುವುದು, ವಿಮಾನ ಸ್ವಚ್ಛಗೊಳಿಸುವುದು ಹಾಗೂ ಇತರ ಕೆಲಸಗಳನ್ನು ಮಾಡುತ್ತಾರೆ. ಇವರಲ್ಲಿ ಹೆಚ್ಚಿನವರು ಗುತ್ತಿಗೆ ನೌಕರರಾಗಿದ್ದು ಒಟ್ಟು 5,000 ಸಿಬ್ಬಂದಿ ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಬುಧವಾರ ಮಧ್ಯರಾತ್ರಿಯಿಂದಲೇ ಗುತ್ತಿಗೆ ನೌಕರರು ಮುಷ್ಕರ ಆರಂಭಿಸಿದರು. ಹೀಗಾಗಿ ಸೇವೆಗೆ ತೊಂದರೆಯಾಯಿತು. ಬಳಿಕ ಕಾಯಂ ನೌಕರರ ಮೂಲಕ ಕೆಲಸ ಮಾಡಿಸಲಾಯಿತು. ಸಮಸ್ಯೆ ಪರಿಹರಿಸುವ ಸಂಬಂಧ ನೌಕರರು ಮತ್ತು ಅಂಗಸಂಸ್ಥೆಯ ಆಡಳಿತ ಮಂಡಳಿ ನಡುವೆ ಮಾತುಕತೆ ನಡೆಯುತ್ತಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.