ADVERTISEMENT

ಜಾಂಬೂರಿ: ಕೋಲಾರ ಜಿಲ್ಲೆಗೆ ‘ಎ’ ಗ್ರೇಡ್‌

700 ವಿದ್ಯಾರ್ಥಿಗಳು ಭಾಗಿ: ವಿವಿಧ ಚಟುವಟಿಕೆಯಲ್ಲಿ ಮೇಲುಗೈ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2022, 21:18 IST
Last Updated 30 ಡಿಸೆಂಬರ್ 2022, 21:18 IST
ಮೂಡುಬಿದಿರೆಯಲ್ಲಿ ನಡೆದ ಅಂತರರಾಷ್ಟ್ರೀಯ ಜಾಂಬೂರಿಯಲ್ಲಿ ಕೋಲಾರ ಜಿಲ್ಲೆಯ ವಿದ್ಯಾರ್ಥಿಗಳೊಂದಿಗೆ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್‌. ಸಿಂಧ್ಯ, ಜಿಲ್ಲಾ ಮುಖ್ಯ ಆಯುಕ್ತ ಕೆ.ವಿ. ಶಂಕರಪ್ಪ ಹಾಗೂ ಪದಾಧಿಕಾರಿಗಳು ಇದ್ದಾರೆ
ಮೂಡುಬಿದಿರೆಯಲ್ಲಿ ನಡೆದ ಅಂತರರಾಷ್ಟ್ರೀಯ ಜಾಂಬೂರಿಯಲ್ಲಿ ಕೋಲಾರ ಜಿಲ್ಲೆಯ ವಿದ್ಯಾರ್ಥಿಗಳೊಂದಿಗೆ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್‌. ಸಿಂಧ್ಯ, ಜಿಲ್ಲಾ ಮುಖ್ಯ ಆಯುಕ್ತ ಕೆ.ವಿ. ಶಂಕರಪ್ಪ ಹಾಗೂ ಪದಾಧಿಕಾರಿಗಳು ಇದ್ದಾರೆ   

ಕೋಲಾರ: ಜಿಲ್ಲೆಯ 700 ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ವಿವಿಧ ಚಟುವಟಿಕೆಗಳಲ್ಲಿ ಉತ್ತಮ ಪ್ರದರ್ಶನ ನೀಡಿಕೋಲಾರಕ್ಕೆ ‘ಎ’ ದರ್ಜೆ ಸ್ಥಾನಮಾನ ತಂದುಕೊಟ್ಟಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಡಿ. 21ರಿಂದ 27ರವರೆಗೆ ಜಾಂಬೂರಿ ನಡೆದಿತ್ತು.

ವಸ್ತು ಪ್ರದರ್ಶನದಲ್ಲಿ ಜಿಲ್ಲೆಯ ಚಿನ್ನದ ಗಣಿ, ಹೈನುಗಾರಿಕೆ, ರೇಷ್ಮೆ ಕೃಷಿ, ಕೋಟಿಲಿಂಗೇಶ್ವರ, ಅಂತರಗಂಗೆಯ ಪ್ರತಿಕೃತಿ ಪ್ರದರ್ಶಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಾಹ, ಜಾತ್ರೆ ವೈಭವ ಪ್ರದರ್ಶಿಸಿ ಮೆಚ್ಚುಗೆ ಪಡೆದುಕೊಂಡರು. ಐಡಿಯಾಥಾನ್‌ ಹಾಗೂ ಹ್ಯಾಕಥಾನ್‌ ಸ್ಪರ್ಧೆಯಲ್ಲಿ ಐದನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ADVERTISEMENT

ಬ್ಯಾಂಡ್‌ ವಾದನ, ಪಥ ಸಂಚಲನ, ಕಲರ್‌ ಪಾರ್ಟಿ, ಜನಪದ ನೃತ್ಯ, ಪ್ರಬಂಧ ಸ್ಪರ್ಧೆ, ಚಿತ್ರಕಲೆ, ಸಾಹಸಮಯ ಚಟುವಟಿಕೆ, ವಿನೋದದ ಆಟಗಳಲ್ಲಿ ಪಾಲ್ಗೊಂಡು ಸೈ ಎನಿಸಿಕೊಂಡರು. ಸ್ಪರ್ಧಿಗಳು ನೀಡಿದ ಪ್ರದರ್ಶನದ ಆಧಾರದ ಮೇಲೆ ಸಂಘಟಕರು ‘ಎ’ ದರ್ಜೆ ಸ್ಥಾನ ಪ್ರಕಟಿಸಿದರು ಎಂದು ಭಾರತ್ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸ್ಕೌಟ್‌ ಬಾಬು ತಿಳಿಸಿದರು.

ಮೈಸೂರಿನಲ್ಲಿ 2016ರಲ್ಲಿನಡೆದಿದ್ದ ಜಾಂಬೂರಿಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ‘ಎ+’ ಸ್ಥಾನ ಪಡೆದಿದ್ದರು. ವಿದ್ಯಾರ್ಥಿಗಳ ಜೊತೆ ಜಿಲ್ಲಾ ಮುಖ್ಯ ಆಯುಕ್ತ ಕೆ.ವಿ. ಶಂಕರಪ್ಪ, ಜಿಲ್ಲಾ ಸಂಸ್ಥೆಯ ಅಧ್ಯಕ್ಷ ಬಿಸಪ್ಪ ಗೌಡ, ಉಪಾಧ್ಯಕ್ಷ ಡಾ.ಚಂದ್ರಶೇಖರ್‌,
ಪದಾಧಿಕಾರಿಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.