ಮಂಡ್ಯ: ಮದ್ದೂರು ತಾಲ್ಲೂಕು ದೊಡ್ಡರಸಿನಕೆರೆ ಗ್ರಾಮದಲ್ಲಿ ರಸ್ತೆಗೆ ಅಂಬರೀಷ್ ಹೆಸರು ನಾಮಕರಣ ಮಾಡಿ ಅಳವಡಿಸಿದ್ದ ನಾಮಫಲಕವನ್ನು ತೆರವುಗೊಳಿಸಿರುವುದು ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ದೊಡ್ಡರಸಿನಕೆರೆ ಗ್ರಾಮದಿಂದ ಮುಮಟ್ಟನಹಳ್ಳಿಗೆ ತೆರಳುವ ರಸ್ತೆಗೆ ನಾಮಕರಣ ಮಾಡಲಾಗಿತ್ತು. ಫೆ. 28ರಂದು ಅಂಬರೀಷ್ ಪತ್ನಿ ಸುಮಲತಾ ನಾಮಫಲಕ ಅನಾವರಣ ಮಾಡಬೇಕಾಗಿತ್ತು. ಆದರೆ, ನಾಮಫಲಕ ಅಳವಡಿಕೆಗೆ ಅನುಮತಿ ಪಡೆದಿಲ್ಲ ಎಂದು ಪೊಲೀಸರು ತಡೆದಿದ್ದರು. ಪೊಲೀಸರು ಅಂಬರೀಷ್ ಭಾವಚಿತ್ರದ ಮೇಲೆ ಕಾಗದ ಮುಚ್ಚಿದ್ದರು. ಶನಿವಾರ ಗ್ರಾಮ ಪಂಚಾಯಿತಿ ಅಧಿಕಾರಿಗಳು ಏಕಾಏಕಿ ನಾಮಫಲಕ ತೆರವುಗೊಳಿಸಿದ್ದಾರೆ. ಇದರ ಹಿಂದೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ಕೈವಾಡವಿದೆ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ.
‘ನಾನು ಅಂಬರೀಷ್ ನಾಮಫಲಕ ತೆರವುಗೊಳಿಸಿಲ್ಲ. ನಾನು ಏನೇ ಮಾಡಿದರೂ ನೇರವಾಗಿ ಮಾಡುತ್ತೇನೆ, ಹಿಂದಿನಿಂದ ಮಾಡುವುದಿಲ್ಲ’ ಎಂದು ಡಿ.ಸಿ.ತಮ್ಮಣ್ಣ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.