
ಬೆಂಗಳೂರು: ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ಅಮಿತ್ ಶಾ ಅವರನ್ನು ಅಸಮರ್ಥ ನಾಯಕ ಎಂದು ಕರೆದಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಅಸಮರ್ಥರನ್ನು ಅಸಮರ್ಥ ಎನ್ನದೆ ಜಗದೇಕ ವೀರ ಎನ್ನಬೇಕೆ ಎಂದು ಪ್ರಶ್ನಿಸಿದ್ದಾರೆ.
ಬಾಂಗ್ಲಾ ವಲಸಿಗರ ಬಗ್ಗೆ ಅತಾರ್ಕಿಕವಾಗಿ ರಾಜ್ಯ ಸರ್ಕಾರವನ್ನು ಟೀಕಿಸುವ ಬಿಜೆಪಿಗರಿಗೆ ಬಾಂಗ್ಲಾ ವಲಸಿಗರು ದೇಶದೊಳಗೆ ನುಸುಳುವಂತಾಗಿದ್ದು ಹೇಗೆ ಮತ್ತು ಯಾರ ಅಸಮರ್ಥತೆ ಎಂಬ ಪ್ರಶ್ನೆಗೆ ಉತ್ತರ ಹೇಳುವ ಧೈರ್ಯವಿಲ್ಲ.
ಬಾಂಗ್ಲಾ ವಲಸಿಗರು ದೇಶದ ಗಡಿ ದಾಟಿ ಬರುವಂತಾಗಿದ್ದು ಕೇಂದ್ರ ಗೃಹ ಸಚಿವರ ವೈಫಲ್ಯವಲ್ಲವೇ?.
ದೆಹಲಿಯ ಕೆಂಪು ಕೋಟೆ ಬಳಿಯೇ ಸ್ಫೋಟವಾಗುತ್ತದೆ ಎಂದರೆ ಅದು ಕೇಂದ್ರ ಗೃಹ ಸಚಿವರ ಅಸಮರ್ಥತೆ ಅಲ್ಲವೇ?
ಪಹಲ್ಗಾಮ್ ದಾಳಿಯಾಗುವಾಗ ಅಮಿತ್ ಶಾ ಅವರ ಚಾಣಾಕ್ಷತನ ಎಲ್ಲಿ ಅಡಗಿತ್ತು?
ವರ್ಷಗಳ ಕಾಲ ಮಣಿಪುರದಲ್ಲಿ ದಂಗೆ ನಡೆಯುತ್ತಿದ್ದುದ್ದನ್ನು ಸುಮ್ಮನೆ ನೋಡುತ್ತಾ ಕುಳಿತಿದ್ದನ್ನು ಅಸಾಮರ್ಥ್ಯ ಎನ್ನಬೇಕೋ ಪರಾಕ್ರಮ ಎನ್ನಬೇಕೋ?
ಮಹಿಳೆಯರ ಬೆತ್ತಲೆ ಮೆರವಣಿಗೆಯಿಂದ ಇಡೀ ಜಗತ್ತಿನ ಎದುರು ದೇಶದ ಘನತೆ ಮಣ್ಣುಪಾಲಾದಾಗ ಕಣ್ಮುಚ್ಚಿ ಕುಳಿತಿದ್ದು ಅಸಮರ್ಥತೆ ಅಲ್ಲದೆ ಇನ್ನೇನು?
ಅಮಿತ್ ಶಾ ಅವರ ಸಾಮರ್ಥ್ಯ, ಪರಾಕ್ರಮಗಳಿರುವುದು ಬಿಜೆಪಿಯೇತರ ಸರ್ಕಾರಗಳನ್ನು ಉರುಳಿಸುವುದರಲ್ಲಿ ಮತ್ತು ಐಸಿಸಿಯನ್ನು ಸಮೃದ್ಧಗೊಳಿಸುವುದರಲ್ಲಿ ಮಾತ್ರವೇ? ಎಂದು ಪ್ರಶ್ನಿಸಿದ್ದಾರೆ.
ಪ್ರಚಾರಕ್ಕಾಗಿ, ಅಸ್ತಿತ್ವಕ್ಕಾಗಿ ಅಮಿತ್ ಶಾ ಅವರನ್ನು ಸ್ಪರ್ಧೆಗೆ ಬಿದ್ದವರಂತೆ ಸಮರ್ಥಿಸಿಕೊಳ್ಳುವುದು ರಾಜ್ಯದ ಬಿಜೆಪಿ ನಾಯಕರಿಗೆ ಅನಿವಾರ್ಯ ಎಂಬ ಸಂಗತಿ ನಮಗೂ ತಿಳಿದಿದೆ, ಜನತೆಗೂ ತಿಳಿದಿದೆ. ಮಹಾತ್ಮ ಗಾಂಧಿ, ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಸೇರಿದಂತೆ ದೇಶ ಕಟ್ಟಿದ ನಾಯಕರ ಬಗ್ಗೆಯೇ ಅಸಂಸದೀಯ ಭಾಷೆಯ ಮೂಲಕ ನಾಲಿಗೆ ಹರಿಬಿಡುವ ರಾಜ್ಯ ಬಿಜೆಪಿ ನಾಯಕರು ಇಂದು ‘ಅಸಮರ್ಥ‘ ಎಂಬ ಪದವನ್ನು ಸಹಿಸಲಾಗದೆ ಒದ್ದಾಡುತ್ತಿರುವುದು ಅವರ ಶೋಚನಿಯ ಸ್ಥಿತಿಗೆ ಹಿಡಿದ ಕನ್ನಡಿ ಎಂದು ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.