ಬೆಂಗಳೂರು: ಇತಿಹಾಸಕಾರ ರಾಮಚಂದ್ರ ಗುಹಾ ಅವರು ಪುರಭವನ ಬಳಿ ಪ್ರತಿಭಟನೆ ನಡೆಸುತ್ತಿದ್ದಾಗ ಅಲ್ಲಿಗೆ ಬಂದ ಪೊಲೀಸರು, ಗುಹಾ ಸಹಿತ ಇತರ ಪ್ರತಿಭಟನಕಾರರನ್ನು ಎಳೆದೊಯ್ದು ತಮ್ಮ ವಶಕ್ಕೆ ಪಡೆದರು.
‘ನಾನು ಗಾಂಧೀಜಿ ಫೋಟೊ ಹಿಡಿದುಕೊಂಡು ಸಂವಿಧಾನದ ಕುರಿತು ಮಾಧ್ಯಮದೊಂದಿಗೆ ಮಾತನಾಡುತ್ತಿದ್ದಾಗಲೇ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಕೆಲಸ ಮಾಡುತ್ತಿದ್ದಾರೆ. ಪಕ್ಷಪಾತದಿಂದ ಕೂಡಿರುವ ಕಾಯ್ದೆಯ ವಿರುದ್ಧ ನಾವೆಲ್ಲರೂ ಅಹಿಂಸಾತ್ಮಕವಾಗಿ ಪ್ರತಿಭಟನೆ ನಡೆಸುತ್ತಿದ್ದೆವು. ಎಲ್ಲರೂ ಶಾಂತಿಯುತವಾಗಿಯೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು’ ಎಂದು ಗುಹಾ ತಿಳಿಸಿದರು.
ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುತ್ತಿದ್ದಾಗಲೇ ಪೊಲೀಸರು ಅಲ್ಲಿಗೆ ಬಂದು ಗುಹಾ ಅವರ ತೋಳನ್ನು ಹಿಡಿದು ಎಳೆದುಕೊಂಡು ಹೋದರು. ಈ ವೇಳೆ ಹೋರಾಟಗಾರರಾದ ಜಿ.ಎನ್.ನಾಗರಾಜ್, ವಿ.ಎಸ್.ವಿಮಲಾ, ಜ್ಯೋತಿ ಅನಂತ ಸುಬ್ಬರಾವ್, ಎಸ್.ವರಲಕ್ಷ್ಮೀ ಅವರನ್ನು ವಶಕ್ಕೆ ಪಡೆಯಲಾಯಿತು. ನಂತರ ಎಲ್ಲರನ್ನೂ ಪೊಲೀಸರು ಬಿಡುಗಡೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.