ADVERTISEMENT

ಜೀವ ನಿರೋಧಕಗಳ ಉತ್ಪಾದನೆಗೆ ಹಿಂದೇಟು ಹಾಕುತ್ತಿವೆ ಕಂಪನಿಗಳು

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 7:42 IST
Last Updated 4 ಜನವರಿ 2020, 7:42 IST
   

ಬೆಂಗಳೂರು: ಜೀವ ನಿರೋಧಕಗಳು ಬಹು ಬೇಗ ತಮ್ಮ ಶಕ್ತಿ ಕಳೆದುಕೊಳ್ಳುತ್ತಿರುವುದರಿಂದ ಔಷಧ ತಯಾರಿಕಾ ಕಂಪನಿಗಳು ಹೊಸ ಹೊಸ ಜೀವ ನಿರೋಧಕಗಳನ್ನು ಉತ್ಪಾದಿಸಲು ಹಿಂದೇಟು ಹಾಕುತ್ತಿವೆ, ಇದು ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಇಸ್ರೇಲ್‍ನ ನೊಬೆಲ್ ಪುರಸ್ಕೃತ ವಿಜ್ಞಾನಿ ಪ್ರೊ.ಅಧಾ ಯೊನಾಥ್ ಹೇಳಿದರು.

ಇಲ್ಲಿನ ಜಿಕೆವಿಕೆಯಲ್ಲಿ ನಡೆಯುತ್ತಿರುವ 107ನೇ ವಿಜ್ಞಾನ ಕಾಂಗ್ರೆಸ್‍ನ ಎರಡನೇ ದಿನವಾದ ಶನಿವಾರ ಸಾರ್ವಜನಿಕ ಉಪನ್ಯಾಸ ನೀಡಿದ ಅವರು, ಪ್ರೊಟೀನ್‍ನಲ್ಲಿ ಡಿಎನ್‍ಎ ಅಡಕವಾಗಿರುತ್ತದೆ. ಇಂತಹ ಪ್ರೊಟೀನ್‌ಗಳನ್ನುರಿಬೊಸೋಮ್ ಉತ್ಪಾದಿಸುತ್ತದೆ. ಆದರೆ, ಬ್ಯಾಕ್ಟೀರಿಯಾಗಳು ರಿಮೊಸೋಮ್ ಮೇಲೆಯೇ ದಾಳಿ ನಡೆಸುವುದರಿಂದ ಜೀವ ನಿರೋಧಕಗಳು ತಮ್ಮ ಸಾಮರ್ಥ್ಯ ಕಳೆದುಕೊಳ್ಳುತ್ತಿವೆ ಎಂದರು.

ಅಮೆರಿಕದಲ್ಲಿ ಪ್ರತಿ ವರ್ಷ 20 ಲಕ್ಷ ಜನ ನಂಜಿನ ಕಾಯಿಲೆಗಳಿಂದ ಬಳಲುತ್ತಾರೆ. ಯೂರೋಪ್‍ನಲ್ಲಿ 2010-14ರ ನಡುವೆ ಇದೇ ಕಾರಣದಿಂದ 33 ಸಾವಿರ ಮಂದಿ ಮೃತಪಟ್ಟಿದ್ದಾರೆ. ಈ ಅವಧಿಯಲ್ಲಿ ನಿರ್ದಿಷ್ಟ ಜೀವ ನಿರೋಧಕಗಳ ಬಳಕೆ ದುಪ್ಪಟ್ಟಾಗಿದ್ದರೂ ಅದು ಪ್ರಯೋಜನಕ್ಕೆ ಬಂದಿಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಹೀಗಾಗಿ ಪರಿಸರ ಸ್ನೇಹಿ ಜೀವ ನಿರೋಧಕಗಳ ಉತ್ಪಾದನೆಯತ್ತ ವಿಶೇಷ ಗಮನ ಹರಿಸಲೇಬೇಕಾಗಿದೆ ಎಂದರು.

ADVERTISEMENT

ಆಫ್ರಿಕಾದಲ್ಲಿ ಜನರ ಸರಾಸರಿ ಜೀವಿತಾವಧಿ ತೀರಾ ಕಡಿಮೆ ಇದೆ. ಜನರು ಸರಾಸರಿ 70ರಿಂದ 80 ವರ್ಷ ಬದುಕಬೇಕು ಎಂಬ ಗುರಿ ನನ್ನದು. ಇದಕ್ಕಾಗಿ ಉಪಯುಕ್ತ ಜೀವ ನಿರೋಧಕಗಳ ಉತ್ಪಾದನೆ ಆಗಬೇಕಿದ್ದು, ಮುಂದಿನ ದಿನಗಳಲ್ಲಿ ಸಹ ಇದಕ್ಕಾಗಿ ಶೋಧನೆ ಮುಂದುವರಿಸುವುದಾಗಿ ತಿಳಿಸಿದರು.

ರಾಮಚಂದ್ರನ್ ಸಾಧನೆ

"ಬೆಂಗಳೂರಿನ ಜಿ.ಎನ್.ರಾಮಚಂದ್ರನ್ ಅವರು ಪ್ರೊಟೀನ್‍ಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಮಹಾನ್ ಸಾಧನೆ ಮಾಡಿದ್ದರು. ಕಂಪ್ಯೂಟರ್ ಬಳಕೆ ಇಲ್ಲದ ಸಮಯದಲ್ಲೇ ಅವರು ರಿಬೊಸೋಮ್‍ನ ಸಂಕೀರ್ಣ ರಚನೆಯನ್ನು ಜಗತ್ತಿಗೆ ತೋರಿಸಿಕೊಟ್ಟರು. ಅವರ ಪ್ರೇರಣೆಯಿಂದಲೇ ನನಗೆ ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವುದು ಸಾಧ್ಯವಾಯಿತು' ಎಂದು ಅಧಾ ಯೊನಾಥ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.