ADVERTISEMENT

ದೇವರ ಹೆಸರಿನಲ್ಲಿ ಶಾಲೆಯ ಜಾಗ ಒತ್ತುವರಿ: ತೆರವುಗೊಳಿಸಲು ಆಯುಕ್ತರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 15:14 IST
Last Updated 25 ಜುಲೈ 2024, 15:14 IST

ರಾಯಚೂರು: ದೇವರ ಹೆಸರಿನಲ್ಲಿ ಶಾಲಾ ಜಾಗ ಒತ್ತುವರಿ ಮಾಡಿದ್ದನ್ನು ತೆರವುಗೊಳಿಸಿ ಪ್ರೌಢಶಾಲೆ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆ (ಎಐಆರ್ ಎಸ್ ) ಜಿಲ್ಲಾ ಸಮಿತಿಯು ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಆಯುಕ್ತರಿಗೆ ಮನವಿ ಸಲ್ಲಿಸಿದೆ.

ರಾಯಚೂರು ನಗರದ ಎಲ್‌.ಬಿ.ಎಸ್ ನಗರದ ಅಲ್ಲಮಪ್ರಭು ಕಾಲೊನಿಯ ಸರ್ಕಾರಿ ಪ್ರೌಢಶಾಲೆ ನಿರ್ಮಾಣಕ್ಕೆ   ವಿಶ್ವನಾಥ ಕಾಲೊನಿಯ ಸರ್ವೆ ನಂಬರ್ 384/1ರ 17.84 ಮೀ. ಅಗಲ, 57 ಮೀ. ಉದ್ದದ ಸಿ.ಎ ಸೈಟನ್ನು ನೀಡಿದ್ದು, ಸ್ಥಳೀಯ ಕೆಲವರು ನಿವೇಶನ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದೂರಿದೆ.

ಭೂಗಳ್ಳರು ಶಿವಲಿಂಗ ಇಟ್ಟು ಒತ್ತುವರಿ ಮಾಡಿಕೊಂಡಿದ್ದು ಕಾಮಗಾರಿ ಮಾಡಬೇಕಿರುವ ಪಿಡಬ್ಲ್ಯೂಡಿ  ಇಲಾಖೆಯ ಅಧಿಕಾರಿಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ಶಾಲೆಯ ಜಾಗ ಒತ್ತುವರಿ ಮಾಡಿಕೊಂಡಿದ್ದರಿಂದ ಚಂದ್ರಬಂಡಾ ಮಾರ್ಗದಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಬೋಧನೆ ಮಾಡಲಾಗುತ್ತಿದೆ. ಈ ಬಗ್ಗೆ ಶಿಕ್ಷಣ ಇಲಾಖೆಯ ಸಚಿವರಿಗೆ, ಸ್ಥಳೀಯ ಶಾಸಕರಿಗೆ, ಇಲಾಖೆಯ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿ, ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಜೀಜ್ ಜಾಗೀರದಾರ್, ರವಿ ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.