ADVERTISEMENT

ಪ್ರಧಾನಿ ಜತೆ ವಿಡಿಯೊ ಸಂವಾದ; ₹4 ಸಾವಿರ ಕೋಟಿ ಪರಿಹಾರಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 19:31 IST
Last Updated 10 ಆಗಸ್ಟ್ 2020, 19:31 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಬೆಂಗಳೂರು: ಭಾರಿ ಮಳೆ ಮತ್ತು ಪ್ರವಾಹದಿಂದ ಸುಮಾರು ₹4 ಸಾವಿರ ಕೋಟಿಯಷ್ಟು ಹಾನಿಯಾಗಿದ್ದು, ಅಷ್ಟು ಹಣವನ್ನು ಮುಂಗಡವಾಗಿ ನೀಡಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ರಾಜ್ಯ ಸರ್ಕಾರ ಮನವಿ ಮಾಡಿದೆ.

ಪ್ರಧಾನಿ ಜತೆ ಸೋಮವಾರ ನಡೆದ ವಿಡಿಯೊ ಸಂವಾದದಲ್ಲಿ ಭಾಗವಹಿಸಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್‌.ಅಶೋಕ ಅವರು ಸುದ್ದಿಗೋಷ್ಠಿ ನಡೆಸಿ ಸಭೆಯಲ್ಲಿ ನಡೆದ ಚರ್ಚೆಯ ವಿವರ ನೀಡಿದರು.

ಮನೆಗಳು, ಸರ್ಕಾರಿ ಕಟ್ಟಡಗಳು, ರಸ್ತೆ, ಬೆಳೆ ನಾಶವಾಗಿವೆ. ಇದರ ಪ್ರಾಥಮಿಕ ಅಂದಾಜು ಮೊತ್ತ ₹4 ಸಾವಿರ ಕೋಟಿ. ಪೂರ್ಣ ಪ್ರಮಾಣದ ಸಮೀಕ್ಷೆ ಇನ್ನೂ ನಡೆಯಬೇಕಿದೆ. ಈಗ ನಷ್ಟ ಆಗಿರುವಷ್ಟು ಪರಿಹಾರ ನೀಡಬೇಕು ಎಂದು ಪ್ರಧಾನಿಯವರಲ್ಲಿ ಕೋರಿದ್ದೇವೆ ಎಂದರು.

ADVERTISEMENT

‘ಸಂತ್ರಸ್ತರಿಗೆ ಆಸರೆ ನೀಡಿರುವ ಸ್ಥಳಗಳನ್ನು ವೀಕ್ಷಿಸಿ ಬಂದಿದ್ದೇನೆ. ನಿರಂತರವಾಗಿ ಪ್ರವಾಹಕ್ಕೆ ತುತ್ತಾಗುವ 10 ಜಿಲ್ಲೆಗಳಲ್ಲಿ ಕಾಯಂ ಕಾಳಜಿ ಕೇಂದ್ರಗಳನ್ನು ಒಳಗೊಂಡ ನೈಸರ್ಗಿಕ ವಿಕೋಪ ಭವನಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ₹200 ಕೋಟಿ ಬಿಡುಗಡೆ ಮಾಡಲಾಗುವುದು’ ಎಂದರು.

ಮುಂಗಾರಿಗೂ ಮೊದಲೇ ಮುಂಜಾಗ್ರತೆ ಕ್ರಮಕ್ಕಾಗಿ ಕೇಂದ್ರ ಸರ್ಕಾರ ₹310 ಕೋಟಿ ಬಿಡುಗಡೆ ಮಾಡಿತ್ತು. ಈಗ ಹಣ ಬಿಡುಗಡೆ ಮಾಡಿದರೆ ರೈತರಿಗೆ ಪರಿಹಾರ ಜತೆಗೆ ಬಿದ್ದು ಹೋಗಿರುವ ವಿದ್ಯುತ್‌ ಕಂಬಗಳು, ಸೇತುವೆ, ರಸ್ತೆ ನಿರ್ಮಾಣಕ್ಕೆ ಬಳಸಬಹುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.