ಬೆಂಗಳೂರು: ಗೃಹ ಸಚಿವನಾಗಿ ನಾನು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಈ ವಿಚಾರದಲ್ಲಿ ನನಗೆ ಸಿದ್ದರಾಮಯ್ಯ ಅವರಿಂದ ಪ್ರಮಾಣಪತ್ರ ಬೇಕಾಗಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಜ್ಞಾನೇಂದ್ರ ಅಸಮರ್ಥ ಗೃಹ ಸಚಿವ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಭಾನುವಾರ ಪ್ರತಿಕ್ರಿಯಿಸಿದ ಅವರು, ʼನಮ್ಮ ಪಕ್ಷ ಮತ್ತು ಮುಖ್ಯಮಂತ್ರಿ ಮೆಚ್ಚುವಂತೆ ಕೆಲಸ ಮಾಡುತ್ತಿದ್ದೇನೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿಲ್ಲದ ಕಾರಣದಿಂದ ರಾಜ್ಯದಲ್ಲಿ ಜಂಗಲ್ ರಾಜ್ ನಿರ್ಮಾಣವಾಗಿದೆ ಎಂದು ಆರೋಪಿಸುತ್ತಿದ್ದಾರೆ. ಅವರ ಪ್ರಮಾಣಪತ್ರದಿಂದ ನನ್ನ ಸಾಮರ್ಥ್ಯ ಅಳೆಯಲು ಸಾಧ್ಯವಿಲ್ಲʼ ಎಂದರು.
ʼನಾನು ಸಮರ್ಥವಾಗಿ ಕೆಲಸ ಮಾಡುತ್ತಿದ್ದೇನೆ, ಇಲಾಖೆಯನ್ನು ಸರಿಯಾಗಿ ನಿಭಾಯಿಸುತ್ತಿದ್ದೇನೆ. ಕೆಲವು ಘಟನೆಗಳನ್ನು ಮುಂದಿಟ್ಟುಕೊಂಡು ಅಸಮರ್ಥ ಎಂದು ಬಿಂಬಿಸುವುದು ಸರಿಯಲ್ಲ. ಯಾವುದೇ ಘಟನೆ ಸಂಭವಿಸಿದರೂ ವಿಳಂಬ ಮಾಡದೇ ಆರೋಪಿಗಳನ್ನು ಬಂಧಿಸಲಾಗುತ್ತಿದೆʼ ಎಂದು ಹೇಳಿದರು.
ಸಿದ್ದರಾಮಯ್ಯ ಕಾಲದಲ್ಲಿ ಗೃಹ ಇಲಾಖೆಯೇ ಡಮ್ಮಿ ಆಗಿತ್ತು. ಯಾರೋ ಒಬ್ಬ ನಿವೃತ್ತ ಪೊಲೀಸ್ ಅಧಿಕಾರಿಯ ಕೈಗೆ ಗೃಹ ಇಲಾಖೆಯನ್ನು ಒಪ್ಪಿಸಿದ್ದರು. ಪಿಎಫ್ಐ ಸಂಘಟನೆ ವಿರುದ್ಧದ ಪ್ರಕರಣಗಳನ್ನು ಹಿಂಪಡೆದವರು ಅವರು. ಅವರಿಂದ ಯಾವ ಪ್ರಮಾಣಪತ್ರವೂ ಬೇಕಿಲ್ಲ ಎಂದರು.
ʼಅವರ ಸರ್ಕಾರ ಇದ್ದಾಗ ರಾಜ್ಯದಲ್ಲಿ ಎಷ್ಟು ಮಂದಿ ಹಿಂದೂ ಕಾರ್ಯಕರ್ತರ ಕೊಲೆಗಳು ನಡೆದಿವೆ ಎಂಬುದು ಗೊತ್ತಿದೆ. ಸಿದ್ದರಾಮಯ್ಯ ಸರ್ಕಾರದ ಅಔಧಿಯಲ್ಲಿ ಏನೆಲ್ಲಾ ಆಗಿತ್ತು ಎಂಬುದನ್ನು ವಿಧಾನಸಭೆಯಲ್ಲಿ ಅವರ ಮುಖದ ಮುಂದೆಯೇ ಹೇಳಿದ್ದೇನೆʼ ಎಂದು ವಾಗ್ದಾಳಿ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.