ಗುವಾಹಟಿ: ಅಸ್ಸಾಂನಲ್ಲಿ ನೆರೆ ಪರಿಸ್ಥಿತಿ ಗಂಭೀರವಾಗಿದ್ದು, 10 ಜಿಲ್ಲೆಗಳಲ್ಲಿ ಸುಮಾರು 31,000 ಮಂದಿ ಪ್ರವಾಹದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂದಿನ ಐದು ದಿನಗಳಲ್ಲಿ ಅಸ್ಸಾಂನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಿದೆ.
ರಾಜ್ಯದ ಚಿರಂಗ್, ದರಂಗ್, ಧೆಮಜಿ, ಧುಬ್ರಿ, ದಿಬ್ರೂಗಢ, ಕೊಕ್ರಜಾರ್, ಲಖೀಂಪುರ, ನಲ್ಬಾರಿ, ಸೊನಿತ್ಪುರ ಹಾಗೂ ಉಡಲ್ಗುರಿ ಜಿಲ್ಲೆಗಳಲ್ಲಿ 30,700ಕ್ಕೂ ಅಧಿಕ ಮಂದಿ ಪ್ರವಾಹದಿಂದ ತೊಂದರೆಗೆ ಸಿಲುಕಿ ಹಾಕಿಕೊಂಡಿದ್ದಾರೆ ಎಂದು ಅಸ್ಸಾಂ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಲಖೀಂಪುರ ಜಿಲ್ಲೆಯಲ್ಲಿ ಹೆಚ್ಚಿನ ಸಮಸ್ಯೆ ಉಂಟಾಗಿದ್ದು, 22,000 ಮಂದಿ ಪ್ರವಾಹದಿಂದ ತೊಂದರೆಗೊಳಗಾಗಿದ್ದಾರೆ. ದಿಬ್ರೂಗಢದಲ್ಲಿ 3,800 ಮಂದಿ ಹಾಗೂ ಕೊಕ್ರಜಾರ್ನಲ್ಲಿ 1,800 ಮಂದಿ ಪ್ರವಾಹದಿಂದ ಸಮಸ್ಯೆಗೆ ಈಡಾಗಿದ್ದಾರೆ.
ಸದ್ಯ 25 ಪರಿಹಾರ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಯಾವುದೇ ನಿರಾಶ್ರಿತರ ಕೇಂದ್ರ ತೆರೆದಿಲ್ಲ. ನೆರೆಯಿಂದಾಗಿ 444 ಗ್ರಾಮಗಳು ಮುಳುಗಡೆಯಾಗಿದ್ದು, 4,741.23 ಹೆಕ್ಟೆರ್ ಪ್ರದೇಶದ ಬೆಳೆ ನಾಶವಾಗಿದೆ.
ಬಿಸ್ವನಾಥ್, ಧುಬ್ರಿ, ದಿಬ್ರೂಗಢ, ಗೋಲಾಘಾಟ್, ಕಮ್ರೂಪ್, ಕರೀಮ್ಗಂಜ್, ಕೊಕ್ರಜಾರ್, ಲಖೀಂಪುರ, ಮಜುಲಿ, ಮೋರಿಗಾಂವ್, ನಾಗಾಂವ್, ನಲ್ಬರಿ, ಶಿವಸಾಗರ್, ಸೋನಿತ್ಪುರ್, ಸೌತ್ ಸಲ್ಮಾರಾ, ತಮುಲ್ಪುರ್ ಮತ್ತು ಉದಲ್ಗುರಿಯಲ್ಲಿ ಭಾರಿ ಪ್ರಮಾಣದ ಭೂಸವೆತ ಉಂಟಾಗಿದೆ. ನೀರನ ರಭಸಕ್ಕೆ ರಸ್ತೆ, ಸೇತುವೆಗಳು ಕೊಚ್ಚಿ ಹೋಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.