ಬೆಂಗಳೂರು: ‘ಜವಾಬ್ದಾರಿ ಸ್ಥಾನದಲ್ಲಿರುವವರು ವಿಧಾನಸಭಾಧ್ಯಕ್ಷರ ಬಗ್ಗೆ ಆರೋಪ ಮಾಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಇದು ಸದನದ ಹಕ್ಕುಚ್ಯುತಿಯಾಗುತ್ತದೆ’ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ಸಚಿವ ಕೃಷ್ಣ ಬೈರೇಗೌಡ ಪ್ರತಿಪಾದಿಸಿದರು.
‘ಆಪರೇಷನ್ ಕಮಲ’ ಆಡಿಯೊ ಚರ್ಚೆ ವೇಳೆ ವಿಧಾನಸಭೆಯಲ್ಲಿ ಸೋಮವಾರ ಮಾತನಾಡಿದ ಅವರು, ‘ರಮೇಶ್ ಕುಮಾರ್ ಅವರು ಹೃದಯ ವೈಶಾಲ್ಯ ಮೆರೆಯಬಹುದು. ಇದು ವಿಧಾನಸಭಾಧ್ಯಕ್ಷರ ವೈಯಕ್ತಿಕ ವಿಚಾರ ಅಲ್ಲ. ಸದನದ ಸದಸ್ಯರಿಗೆ ಸಂಬಂಧಿಸಿದ ವಿಚಾರ’ ಎಂದರು. ‘ದಾರಿಯಲ್ಲಿ ಹೋಗುವವರು ಮಾತನಾಡಿದ್ದರೆ ಗಂಭೀರವಾಗಿ ತೆಗೆದುಕೊಳ್ಳಬೇಕಿರಲಿಲ್ಲ. ಅದನ್ನು ಲಘುವಾಗಿ ಪರಿಗಣಿಸಬಹುದಿತ್ತು’ ಎಂದರು.
‘ಸದಸ್ಯರೊಬ್ಬರ ಹಕ್ಕುಚ್ಯುತಿಯಾದಾಗ ಸಣ್ಣ ಪತ್ರಿಕೆಯ ಸಂಪಾದಕರೊಬ್ಬರನ್ನು ಕರೆಸಿ ವಾಗ್ದಂಡನೆ ವಿಧಿಸಲಾಗಿತ್ತು. ಇದೇ ರೀತಿಯ ಹಲವು ಘಟನೆಗಳು ನಡೆದಿವೆ’ ಎಂದು ಅವರು ನೆನಪಿಸಿಕೊಂಡರು. ‘ವ್ಯಕ್ತಿಯೊಬ್ಬ ಲಘುವಾಗಿ ಮಾತನಾಡಿದ ಕಾರಣಕ್ಕೆ ಸೀತೆಯನ್ನು ರಾಮ ಅಗ್ನಿಪರೀಕ್ಷೆಗೆ ಒಡ್ಡಿದರು’ ಎಂದೂ ಅವರು ಹೇಳಿದರು.
‘ರಾಮಾಯಣ ಕಾಲ್ಪನಿಕ’ ಎಂದು ವಿರೋಧ ಪಕ್ಷದ ಸದಸ್ಯರೊಬ್ಬರು ಕೂಗಿದರು. ಅದಕ್ಕೆ ಸಚಿವರು ಆಕ್ಷೇಪ ವ್ಯಕ್ತಪಡಿಸಿದರು. ‘ಕಾಲ್ಪನಿಕ ಎಂದು ನಿಮ್ಮ ಪಕ್ಷವೇ ಸುಪ್ರೀಂ ಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿದೆ’ ಎಂದು ಬಿಜೆಪಿಯ ಸಿ.ಟಿ.ರವಿ ಹೇಳಿದರು. ‘ಮೊದಲು ರಮೇಶ್ ಕುಮಾರಾಯಣ ಮುಗಿಸಿ. ಬಳಿಕ ರಾಮಾಯಣದ ಬಗ್ಗೆ ಚರ್ಚಿಸಿ’ ಎಂದು ರಮೇಶ್ ಕುಮಾರ್ ಚಟಾಕಿ ಹಾರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.