ಬೆಳಗಾವಿ: ಅಥಣಿ ಮತ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಬಂಡಾಯದ ಬಿಸಿ ತಟ್ಟಿದೆ. ಆ ಪಕ್ಷದ ಬಂಡಾಯ ಅಭ್ಯರ್ಥಿಗಳು ಒಕ್ಕೂಟ ರಚನೆ ಮಾಡಿಕೊಂಡಿದ್ದು, ಕಣದಿಂದ ಹಿಂದೆ ಸರಿಯುವುದಿಲ್ಲ ಎಂದು ಘೋಷಿಸಿದ್ದಾರೆ. ಶಾಸಕ, ಕ್ಷೇತ್ರದ ಉಸ್ತುವಾರಿ ಎಂ.ಬಿ. ಪಾಟೀಲ ಅವರ ಮನವೊಲಿಕೆಗೂ ಅವರು ಜಗ್ಗಿಲ್ಲ.
ಮಾಜಿ ಶಾಸಕ ಶಹಜಹಾನ್ ಡೊಂಗರಗಾಂವ, ಮುಖಂಡರಾದ ಎಸ್.ಕೆ. ಬುಟಾಳಿ, ಸುರೇಶ ಪಾಟೀಲ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ನ.21 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದು, ಮೂವರಲ್ಲಿ ಯಾರಾದರೂ ಒಬ್ಬರು ಕಣದಲ್ಲಿ ಉಳಿಯುವ ಕುರಿತು ಮಂಗಳವಾರ ಸಭೆ ನಡೆಸಿ ಚರ್ಚಿಸಿದ್ದಾರೆ. ಉಳಿದವರಿಗಾಗಿ ಎಲ್ಲರೂ ದುಡಿಯುವ ಬಗ್ಗೆ ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ಬೆಂಬಲಿಗರ ಸಭೆಯನ್ನೂ ನಡೆಸಿದ್ದಾರೆ.
ಈ ಮೂವರನ್ನೂ ಸೋಮವಾರ ಭೇಟಿಯಾಗಿದ್ದ ಎಂ.ಬಿ. ಪಾಟೀಲ, ಕಣದಿಂದ ಹಿಂದೆ ಸರಿಯುವಂತೆ ಮನವಿ ಮಾಡಿಕೊಂಡಿದ್ದರು.
‘ಇಷ್ಟು ವರ್ಷಗಳಿಂದ ದುಡಿದರೂ ಪಕ್ಷದಿಂದ ನಮಗೆ ಅನ್ಯಾಯವಾಗಿದೆ. ಹೀಗಾಗಿ, ಕಣಕ್ಕಿಳಿದಿದ್ದೇವೆ. ನಮ್ಮ ಉಮೇದುವಾರಿಕೆಗಳು ಕ್ರಮಬದ್ಧವಾಗಿವೆ. ಮೂವರಲ್ಲಿ ಒಬ್ಬರು ಉಳಿಯುತ್ತೇವೆ. ಯಾರು ನಾಮಪತ್ರ ವಾಪಸ್ ಪಡೆಯಬೇಕು ಎನ್ನುವುದನ್ನು ಇನ್ನೂ ನಿರ್ಧರಿಸಿಲ್ಲ’ ಎಂದು ಡೊಂಗರಗಾಂವ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.