ADVERTISEMENT

11 ಜಿಲ್ಲೆಗಳ ಶಿಕ್ಷಕರಿಗೆ ಹಾಜರಾತಿ ವಿನಾಯಿತಿ

ಶಾಲೆಗಳಲ್ಲಿ ಇಂದಿನಿಂದ ದಾಖಲಾತಿ ಆರಂಭ l ಶಿಕ್ಷಕರ‌ ವರ್ಗಾವಣೆ ವೇಳಾಪಟ್ಟಿ ಶೀಘ್ರ

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 21:38 IST
Last Updated 14 ಜೂನ್ 2021, 21:38 IST

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆ ಮಂಗಳವಾರ (ಜೂನ್‌ 15) ಆರಂಭವಾಗುತ್ತಿದ್ದು, ಲಾಕ್‌ಡೌನ್ ಜಾರಿಯಲ್ಲಿರುವ 11 ಜಿಲ್ಲೆಗಳ ಶಿಕ್ಷಕರಿಗೆ ಶಾಲಾ ಹಾಜರಾತಿಯಿಂದ ವಿನಾಯಿತಿ ನೀಡಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ
ಎಸ್. ಸುರೇಶ್‌ಕುಮಾರ್ ತಿಳಿಸಿದರು.

ಇಲಾಖೆಯ ಅಧಿಕಾರಿಗಳ ಜೊತೆ ಸೋಮವಾರ ಸಭೆ ನಡೆಸಿದ ಬಳಿಕ ಮಾತ
ನಾಡಿದ ಅವರು, ‘ಶಿಕ್ಷಕರು ಮಂಗಳವಾರದಿಂದ ಶಾಲೆಗಳಿಗೆ ಹಾಜರಾಗಿ ಮಕ್ಕಳ ನೋಂದಣಿ ಪ್ರಕ್ರಿಯೆ ಆರಂಭಿಸಬೇಕಾಗಿದೆ. ಆದರೆ, ಕಠಿಣ ನಿರ್ಬಂಧಗಳು ಮುಂದುವರಿಯಲಿರುವ ಜಿಲ್ಲೆಗಳ ಶಿಕ್ಷಕರುಮಾತ್ರ ಲಾಕ್‌ಡೌನ್ ತೆರವಾದ ದಿನದಿಂದ ಶಾಲೆಗಳಿಗೆ ಹಾಜರಾಗಲು ಅನುಮತಿ ನೀಡಲಾಗಿದೆ‌’ ಎಂದರು.

ಜುಲೈ 1ರಿಂದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳನ್ನು ಆರಂಭಿಸಲಾಗುವುದು. ಹೀಗಾಗಿ, ಮಕ್ಕಳ ಕಲಿಕೆಗೆ ಪೂರ್ವ ತಯಾರಿಯನ್ನು ಜೂನ್‌ 15ರಿಂದ ಶಿಕ್ಷಕರು ಆರಂಭಿಸಬೇಕು ಎಂದು ಇದೇ
4ರಂದು ಸಾರ್ವಜನಿಕ ಶಿಕ್ಷಣ ಇಲಾಖೆ
ಸುತ್ತೋಲೆ ಹೊರಡಿಸಿತ್ತು. ಲಾಕ್‌ಡೌನ್ ಮುಂದುವರಿದಿರುವ ಜಿಲ್ಲೆಗಳಲ್ಲಿ
ಶಿಕ್ಷಕರು ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ.

ADVERTISEMENT

ಮೌಲ್ಯಾಂಕನ ಅವಧಿ ವಿಸ್ತರಣೆ: ‘ಹಲವು ಉಪನ್ಯಾಸಕ ಸಂಘಟನೆಗಳು ಮನವಿ ಮಾಡಿದ್ದರಿಂದ ಮೊದಲ ಪಿಯುಸಿ ಮೌಲ್ಯಾಂಕನ ಪ್ರಕ್ರಿಯೆಯ ಸಮಯವನ್ನು ಎಲ್ಲ ಜಿಲ್ಲೆಗಳ ಲಾಕ್‌ಡೌನ್ ಅವಧಿ ಪೂರ್ಣ
ಗೊಳ್ಳುವವರೆಗೆ ವಿಸ್ತರಿಸಿ ಆದೇಶ ಹೊರಡಿಸ
ಲಾಗುವುದು’ ಎಂದು ಸುರೇಶ್‌ಕುಮಾರ್‌ ತಿಳಿಸಿದರು.

ಚೈಲ್ಡ್ ಪ್ರೊಫೈಲ್: ‘ಈ ಬಾರಿ ನಿಗದಿತ ಅವಧಿಯ ಮೌಲ್ಯಮಾಪನ ಪ್ರಕ್ರಿಯೆಯನ್ನು ಹೆಚ್ಚು ಸಮರ್ಥವಾಗಿ ಜಾರಿಗೊಳಿಸುವ ಅಗತ್ಯವಿದೆ. ಪ್ರತಿ ಸೂಚಿತ ಅವಧಿಗೆ ವಿದ್ಯಾರ್ಥಿಗಳ ಚೈಲ್ಡ್ ಪ್ರೊಫೈಲ್‌ಗಳನ್ನು ನಿಯಮಿತವಾಗಿ ದಾಖಲಿಸುವ, ಕಲಿಕಾ ಸಾಮರ್ಥ್ಯಗಳನ್ನು ಅಳೆಯುವ ಮಾನದಂಡ
ಗಳಾಗಿ ರೂಪಿಸುವ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಅತ್ಯವಶ್ಯ
ವಾಗಿದ್ದು, ಅಂಥ ಸಂದರ್ಭದಲ್ಲಿ ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಿಯಾಯೋಜನೆ ಸಿದ್ಧಪಡಿಸಬೇಕು’ ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ವೇಳಾಪಟ್ಟಿ ಶೀಘ್ರ: ‘ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯ ಕುರಿತ ನಿಯಮಗಳಿಗೆ ಆಕ್ಷೇಪಣೆ ಸಲ್ಲಿಸುವ ಅವಧಿ ಪೂರ್ಣಗೊಂಡ ತಕ್ಷಣ ಅಧಿಸೂಚನೆ ಹೊರಡಿಸಿ, ತಂತ್ರಜ್ಞಾನಾಧಾರಿತ ವರ್ಗಾವಣಾ ಪ್ರಕ್ರಿಯೆ ನಡೆಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.