ಕಂದಾಯ ಸಚಿವ ಕೃಷ್ಣಬೈರೇಗೌಡ
ಬೆಂಗಳೂರು: ಎಲ್ಲಾ 7 ದಿನಗಳ ಮತ್ತು 15 ದಿನಗಳ ನೋಟಿಸ್ ಅವಧಿ ಹೊಂದಿರುವ ಮ್ಯುಟೇಶನ್ಗಳನ್ನು ನೋಟಿಸ್ ಅವಧಿ ಮುಕ್ತಾಯವಾದ ನಂತರ ತಂತ್ರಾಂಶದ ಮೂಲಕ ಮಾನವ ಹಸ್ತಕ್ಷೇಪ ಇಲ್ಲದೆ ಸರ್ವರ್ ಸಹಿ ಮೂಲಕ ಸ್ವಯಂ ಚಾಲಿತವಾಗಿ ಅನುಮೋದನೆಗೊಳ್ಳುವ ಹೊಸ ವ್ಯವಸ್ಥೆಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಚಾಲನೆ ನೀಡಿದ್ದಾರೆ.
ವಿಕಾಸಸೌಧದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಹೊಸ ತಂತ್ರಾಂಶಕ್ಕೆ ಚಾಲನೆ ನೀಡಿದರು. ಇದರಿಂದಾಗಿ ನೋಟಿಸ್ ಅವಧಿ ಹೊಂದಿರುವ ಮ್ಯುಟೇಶನ್ಗಳು ಕ್ರಯ, ವಿಭಾಗ, ದಾನ, ಪೌತಿ,ವಿಲ್ ಮುಂತಾದವು ಆಗಿರುತ್ತವೆ. ಇವೆಲ್ಲವನ್ನೂ ಸ್ವಯಂಚಾಲಿತವಾಗಿ ಅನುಮೋದನೆಗೊಳ್ಳುತ್ತವೆ.
ಒಂದು ವೇಳೆ 7 ಕೆಲಸದ ದಿನಗಳು ಅಥವಾ 15 ಕೆಲಸದ ದಿನಗಳು ನೋಟಿಸ್ ಅವಧಿಯೊಳಗೆ ಕಂದಾಯ ನಿರೀಕ್ಷಕರು (ಸರ್ಕಾರಿ ಆಕ್ಷೇಪ) ಅಥವಾ ಸಾರ್ವಜನಿಕರು ಯಾವುದೇ ತಕರಾರು ನೀಡಿದ್ದಲ್ಲಿ, ಅಂತಹ ಮ್ಯುಟೇಶನ್ ಅನ್ನು ಪೂರ್ಣಗೊಳಿಸದೆ, ಆರ್ಸಿಸಿಎಂಎಸ್ ತಂತ್ರಾಂಶದ ತಹಶೀಲ್ದಾರ್ ನ್ಯಾಯಾಲಯಕ್ಕೆ ಆ ಪ್ರಕರಣವನ್ನು ವರ್ಗಾಯಿಸಲಾಗುತ್ತದೆ. ತಹಶೀಲ್ದಾರರ ನಿರ್ಧಾರದಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
ಈ ಹಿಂದೆ ಮ್ಯುಟೇಶನ್ಗಳಿಗೆ ಆಕ್ಷೇಪಣೆ ಇದ್ದಲ್ಲಿ ಅಥವಾ ಅನುಮೋದನೆ ನೀಡಬೇಕಾದಲ್ಲಿ, ರಾಜಸ್ವ ನಿರೀಕ್ಷಕರು ತಾಲ್ಲೂಕು ಕಚೇರಿಗಳಿಗೆ ಬಂದು ಸಲ್ಲಿಸಬೇಕಾಗಿತ್ತು. ಈಗ ರಾಜಸ್ವ ನಿರೀಕ್ಷರಿಗೆ ಲಾಗಿನ್ ನೀಡಿದ್ದು, ಯಾವುದೇ ಸ್ಥಳದಿಂದ ಆಕ್ಷೇಪಣೆ ಸಲ್ಲಿಸಲು ತಂತ್ರಾಂಶದಲ್ಲಿ ಅವಕಾಶ ನೀಡಲಾಗಿದೆ.
ಆಧಾರ್ ಜೋಡಣೆಗೆ ಮನವಿ: ಪಹಣಿಗಳಿಗೆ(ಆರ್ಟಿಸಿ) ಆಧಾರ್ ಅನ್ನು ಕಡ್ಡಾಯವಾಗಿ ಜೋಡಣೆ ಮಾಡಬೇಕು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಮನವಿ ಮಾಡಿದರು.
ಆಧಾರ್ ಜೋಡಣೆ ಮಾಡುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೂ ಸಾಕಷ್ಟು ಜನ ಮಾಡಿಲ್ಲ. ಹೀಗಾಗಿ ಖಾತೆ ಬದಲಾವಣೆ ಆಗಿದೆ, ನಮ್ಮ ಗಮನಕ್ಕೇ ಬಂದಿಲ್ಲ ಎಂದು ಎಷ್ಟೋ ಜನ ದೂರು ನೀಡುತ್ತಾರೆ. ಆಧಾರ್ ಜೋಡಣೆ ಮಾಡುವುದರಿಂದ ವಂಚನೆಗೆ ಒಳಗಾಗುವುದನ್ನು ತಪ್ಪಿಸಬಹುದಾಗಿದೆ. ಪಹಣಿಯಲ್ಲಿ ಏನೇ ಬದಲಾವಣೆ ಆದರೂ ಮಾಲೀಕರಿಗೆ ಎಸ್ಎಂಎಸ್ ಸಂದೇಶ ಬರುತ್ತದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.