ಶಿಗ್ಗಾವಿ: ಹುಬ್ಬಳ್ಳಿಯ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ವತಿಯಿಂದ ನೀಡುವ ‘ಅವ್ವ’ ಪ್ರಶಸ್ತಿಗೆ ರಂಗಕರ್ಮಿ ಬಿ.ಜಯಶ್ರೀ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ₹25 ಸಾವಿರ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಎಚ್.ಆರ್.ಸುಜಾತಾ ಅವರ ‘ನೀಲಿ ಮೂಗಿನ ನತ್ತು’ ಕೃತಿಗೆ ಅಕ್ಕ ಪ್ರಶಸ್ತಿ, ಸನ್ನಿಧಿ ಟಿ.ರೈ ಪೆರ್ಲ ಅವರ ‘ಅಮರಾವತಿ ಕೃತಿ’ಗೆ ಅರಳುಮೊಗ್ಗು ಪ್ರಶಸ್ತಿ ಹಾಗೂ ಡಾ.ಕೆ.ಶಶಿಕಾಂತ ಅವರ ‘ಅವ್ವ ಹಾಡಿದ ಕಾಳಿಂಗರಾಯನ ಹಾಡು’ ಕೃತಿಗೆ ಜಾನಪದ ಸಿರಿ ಪ್ರಶಸ್ತಿ ಆಯ್ಕೆಯಾಗಿದೆ. ಲೇಖಕ ಚಂದ್ರಶೇಖರ ವಸ್ತ್ರದ ಸಂಪಾದಿಸಿದ ‘ನಾಟಕಗಳಲ್ಲಿ ಅವ್ವ’ ಕೃತಿಯನ್ನು ಧಾರವಾಡ ಖ್ಯಾತ ಸಂಶೋಧಕ, ಸಾಹಿತಿ ಡಾ.ವೀರಣ್ಣ ರಾಜೂರ ಗ್ರಂಥ ಲೋಕಾರ್ಪಣೆ ಮಾಡಲಿದ್ದಾರೆ.
ಜ.10ರಂದು ಸಂಜೆ 4ಗಂಟೆಗೆ ತಾಲ್ಲೂಕಿನ ಶಿಶುವಿನಹಾಳ ಗುರು ಗೋವಿಂದ ಭಟ್ಟ ಹಾಗೂ ಸಂತ ಶಿಶುವಿನಹಾಳ ಶರೀಫ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ ಜರುಗಲಿದೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದ ಶಿವಕುಮಾರ ಉದಾಸಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ ಪಾಲ್ಗೊಳ್ಳುವರು ಎಂದು ಟ್ರಸ್ಟ್ ಉಪಾಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮಾಯಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.