ADVERTISEMENT

ಅಂಗಾಂಗ ಕಸಿಗೆ ಉಚಿತ ಆಸ್ಪತ್ರೆ: ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದಿಂದ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 20:19 IST
Last Updated 2 ಜನವರಿ 2026, 20:19 IST
ಸಚಿವ ಶರಣಪ್ರಕಾಶ ಪಾಟೀಲ
ಸಚಿವ ಶರಣಪ್ರಕಾಶ ಪಾಟೀಲ   

ಬೆಂಗಳೂರು: ಬಹು ಅಂಗಾಗಗಳ ಕಸಿ ಮಾಡುವ ಸಾವಿರ ಹಾಸಿಗೆ ಸಾಮರ್ಥ್ಯದ ಉಚಿತ ಚಿಕಿತ್ಸೆ ನೀಡುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ₹1,000 ಕೋಟಿ ವೆಚ್ಚದಲ್ಲಿ ಅಜೀಂ ಪ್ರೇಮ್‌ಜಿ ಪ್ರತಿಷ್ಠಾನವು ಬೆಂಗಳೂರಿನಲ್ಲಿ ನಿರ್ಮಿಸಲಿದೆ. 

ಶುಕ್ರವಾರ ನಡೆದ ಸಚಿವ ಸಂ‍ಪುಟ ಸಭೆಯಲ್ಲಿ ಈ ಮಹತ್ವದ ಯೋಜನೆಗೆ ಅನುಮೋದನೆ ನೀಡಲಾಗಿದೆ.

ಸಂಪುಟ ಸಭೆ  ಬಳಿಕ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು. ಉಚಿತ ಸೇವೆ ನೀಡುವ ದೇಶದ ಅತಿ ದೊಡ್ಡ ದತ್ತಿ ಆಸ್ಪತ್ರೆ ಇದಾಗಲಿದೆ ಎಂದೂ ಅವರು ಹೇಳಿದರು.

ADVERTISEMENT

‘ಬೆಂಗಳೂರಿನ ಇನ್ಸ್‌ಟಿಟ್ಯೂಟ್‌ ಆಫ್‌ ಗ್ಯಾಸ್ಟ್ರೋ ಎಂಟರಾಲಜಿ ವತಿಯಿಂದ ಅಜೀಂ ಪ್ರೇಮ್‌ಜಿ ಪ್ರತಿಷ್ಠಾನ ಈ ಆಸ್ಪತ್ರೆಯನ್ನು ನಡೆಸಲಿದೆ. ಇದಕ್ಕೆ ನಿಮ್ಹಾನ್ಸ್‌ ಪಕ್ಕದಲ್ಲಿರುವ ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ಆವರಣದಲ್ಲಿರುವ 10 ಎಕರೆ ಜಮೀನನ್ನು 99 ವರ್ಷಗಳಿಗೆ ಲೀಸ್ ಆಧಾರದಲ್ಲಿ ನೀಡಲಾಗುವುದು. ಈ ಆಸ್ಪತ್ರೆ ನಿರ್ಮಾಣಕ್ಕೆ ಅಜೀಂ ಪ್ರೇಮ್‌ಜಿ ಪ್ರತಿಷ್ಠಾನ ₹1,000 ಕೋಟಿ ಹೂಡಿಕೆ ಮಾಡಲಿದೆ. ಆಸ್ಪತ್ರೆಯ ನಿರ್ವಹಣೆಗೆ ಪ‍್ರತಿಷ್ಠಾನವು ಪ್ರತಿ ವರ್ಷ ₹350 ಕೋಟಿ ವೆಚ್ಚ ಮಾಡಲಿದೆ’ ಎಂದು ಹೇಳಿದರು.

ಇಲ್ಲಿ ಹೃದಯ, ಕಿಡ್ನಿ, ಯಕೃತ್ತು ಸೇರಿ ಎಲ್ಲ ರೀತಿಯ ಅಂಗಗಳ ಕಸಿ ಮಾಡಲಾಗುವುದು. ಬಿಪಿಎಲ್‌ ಕುಟಂಬಗಳಿಗೆ ಉಚಿತ ಮತ್ತು ಉಳಿದವರಿಗೆ ಕಡಿಮೆ ವೆಚ್ಚದಲ್ಲಿ ಸೇವೆ ನೀಡಲಾಗುತ್ತದೆ. ಮೊದಲ ಹಂತದಲ್ಲಿ 300 ಹಾಸಿಗೆ ಸೌಲಭ್ಯ ಕಲ್ಪಿಸಲಿದ್ದು, ನಂತರ ಸಾವಿರಕ್ಕೆ ಹೆಚ್ಚಿಸಲಿದ್ದಾರೆ ಎಂದು ಅವರು ವಿವರಿಸಿದರು.

ಅಪಘಾತ ಮತ್ತು ಇತರ ಕಾರಣಗಳಿಂದ ಮೃತಪಟ್ಟವರ ಅಂಗಾಗಗಳನ್ನು ಪಡೆದು ಕಸಿ ಮಾಡಲು ಅನುಕೂಲ ಆಗುವುದರಿಂದ ನಿಮ್ಹಾನ್ಸ್‌ ಪಕ್ಕದಲ್ಲೇ ಜಮೀನು ನೀಡಲು ತೀರ್ಮಾನಿಸಲಾಗಿದೆ. ಈ ಆಸ್ಪತ್ರೆಗೆ ವೈದ್ಯರೂ ಸೇರಿದಂತೆ ಎಲ್ಲ ಸಿಬ್ಬಂದಿ ನೇಮಕವನ್ನು ಅಜೀಂ ಪ್ರೇಮ್‌ಜಿ ಪ್ರತಿಷ್ಠಾನವೇ ಮಾಡಲಿದೆ. ಸರ್ಕಾರದ ಕಡೆಯಿಂದ ವೈದ್ಯಕೀಯ ಶಿಕ್ಷಣ ಸಚಿವರು, ಅದೇ ಇಲಾಖೆಯ ಕಾರ್ಯದರ್ಶಿ ಮತ್ತು ಹಣಕಾಸು ಇಲಾಖೆ ಕಾರ್ಯದರ್ಶಿ ಪ್ರತಿನಿಧಿಗಳಾಗಿರುತ್ತಾರೆ. ಸದ್ಯವೇ ತಿಳಿವಳಿಕೆ ಪತ್ರಕ್ಕೆ ಸಹಿ ಮಾಡಲಾಗುವುದು ಎಂದು ಶರಣ ಪ್ರಕಾಶ ತಿಳಿಸಿದರು.

113 ಶಾಲೆಗೆ ₹685.57 ಕೋಟಿ ನಿಧಿ

113 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್‌ ಶಾಲೆಗಳಾಗಿ ಉನ್ನತೀಕರಿಸುವ ಯೋಜನೆಗೆ ಇನ್ಫೊಸಿಸ್‌ ಫೌಂಡೇಶನ್‌ ₹685.57 ಕೋಟಿ ಒದಗಿಸಲಿದೆ.

ಇನ್ಫೊಸಿಸ್‌ ತನ್ನ ‘ಸಾಮಾಜಿಕ ಹೊಣೆಗಾರಿಕೆ ನಿಧಿ’ಯಡಿ ಈ ಸಂಪನ್ಮೂಲ ನೀಡಲಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ 16 ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 97 ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಲಾಗುತ್ತಿದೆ. ಈ ಯೋಜನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ರಾಜ್ಯದಲ್ಲಿನ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಸಮುದಾಯ ಮತ್ತು ಸಾಮಾಜಿಕ ಹೊಣೆಗಾರಿಕೆ ನಿಧಿ ಬಳಸಿಕೊಳ್ಳಲು ರೂಪಿಸಿದ ಸಿಸಿಎಸ್‌ಆರ್‌ ನೀತಿಗೆ ಸಂಪುಟ ಸಭೆ ಅನುಮೋದನೆ ನೀಡಿದೆ.

ಸಿಎಸ್‌ಆರ್‌ ನಿಧಿ ಬಳಕೆ ಹಾಗೂ ವೆಬ್‌ಪೋರ್ಟಲ್‌ ಮತ್ತು ಮೊಬೈಲ್‌ ಅಪ್ಲಿಕೇಶನ್‌ ಮೂಲಕ ದಾನಿಗಳಿಂದ ನೆರವು ಪಡೆಯಲು ಹೊಸ ನೀತಿ ಅನುವು ಮಾಡಿಕೊಟ್ಟಿದೆ. ಗುಣಮಟ್ಟದ ಶಿಕ್ಷಣ ಸುಧಾರಣೆಗಾಗಿ ಏಕ ಗವಾಕ್ಷಿ ವ್ಯವಸ್ಥೆಯ ಮೂಲಕ ಬದ್ಧ ಪಾಲುದಾರರ ಗುಂಪನ್ನು
ರಚಿಸಬಹುದಾಗಿದೆ. ಸರ್ಕಾರಿ ಶಾಲೆಗಳು ಮತ್ತು ಶಾಲಾ ವಿದ್ಯಾರ್ಥಿಗಳ ಸಬಲೀಕರಣಕ್ಕೆ ಹೊಸ ನೀತಿ ನೆರವಾಗಲಿದೆ. 

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳ ರಚನೆಯನ್ನು ಉನ್ನತೀಕರಿಸಿ, ಉತ್ಕೃಷ್ಟ ಸಂಸ್ಥೆಯಾಗಿಸಲು ₹36.90 ಕೋಟಿ ಅನುದಾನ ಬಿಡುಗಡೆ ಮಾಡಲು ಸಂಪುಟ ಸಭೆ ಸಮ್ಮತಿಸಿದೆ.

ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ₹35.32 ಕೋಟಿ ಮೊತ್ತದ 41,685 ಪೀಠೋಪಕರಣ ಖರೀದಿಸಲು ಆಡಳಿತ್ಮಕ ಅನುಮೋದನೆ ನೀಡಲಾಗಿದೆ.