ADVERTISEMENT

‘ಲವ್‌ ಜಿಹಾದ್‌’ ಕಾನೂನಿಗೆ ಬಿ.ಎಲ್‌.ವೇಣು ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 13:31 IST
Last Updated 3 ಡಿಸೆಂಬರ್ 2020, 13:31 IST
ಬಿ.ಎಲ್. ವೇಣು.
ಬಿ.ಎಲ್. ವೇಣು.   

ಚಿತ್ರದುರ್ಗ: ಸಮಾಜದಲ್ಲಿ ಹಾಸುಹೊಕ್ಕಾಗಿರುವ ಪ್ರೀತಿ–ಪ್ರೇಮಕ್ಕೆ ‘ಲವ್‌ ಜಿಹಾದ್‌’ ಹೆಸರಿಟ್ಟು ಜಾತಿ ಹಾಗೂ ಧರ್ಮಗಳ ನಡುವೆ ಧ್ವೇಷ ಬಿತ್ತುವ ಹುನ್ನಾರ ನಡೆಯುತ್ತಿದೆ ಎಂದು ಕಾದಂಬರಿಕಾರ ಬಿ.ಎಲ್‌.ವೇಣು ಅಭಿಪ್ರಾಯಪಟ್ಟಿದ್ದಾರೆ.

ಗುರುವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ‘ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯನ್ನು ಒತ್ತಾಯ ಪೂರ್ವಕವಾಗಿ ಪ್ರೀತಿ ಮಾಡಲು ಸಾಧ್ಯವಿಲ್ಲ. ಹಿರಿಯರು ನಿಶ್ಚಯಿಸಿದ ವಿವಾಹಗಳು, ಪ್ರೇಮ ವಿವಾಹಗಳು ವೈಫಲ್ಯ ಆಗಿಲ್ಲವೇ’ ಎಂದು ಪ್ರಶ್ನಿಸಿದರು.

‘ಚುನಾವಣೆ ಸಮೀಪಿಸುತ್ತಿದ್ದಂತೆ ಜನರನ್ನು ಕೆರಳಿಸಲು ರಾಜಕೀಯ ಪಕ್ಷಗಳು ಮುಂದಾಗಿವೆ. ದೇಶದ ಕ್ರಿಶ್ಚಿಯನ್ನರು ಹಾಗೂ ಮುಸ್ಲಿಮರು ಒಂದು ಕಾಲದಲ್ಲಿ ಹಿಂದೂಗಳೇ ಆಗಿದ್ದರು. ಅಸ್ಪೃಶ್ಯತೆಗೆ ಜೋತು ಬಿದ್ದ, ಮಾನವೀಯತೆ ಇಲ್ಲದ ಧರ್ಮದಲ್ಲಿ ಉಳಿಯಲು ಯಾರೂ ಇಷ್ಟಪಡುವುದಿಲ್ಲ’ ಎಂದರು.

ADVERTISEMENT

‘ರಾಮಾಯಣ ಮತ್ತು ಮಹಾಭಾರತದ ಕಾಲದಲ್ಲಿ ಅನುಲೋಮ, ಪ್ರತಿಲೋಮ ಹಾಗೂ ಗಾಂಧರ್ವ ವಿವಾಹ ಪದ್ಧತಿ ರೂಢಿಯಲ್ಲಿದ್ದವು. ವೇದಗಳ ಕಾಲದಲ್ಲಿಯೇ ಜಮಧಗ್ನಿ ಹಾಗೂ ರೇಣುಕಾ, ವಶಿಷ್ಠ ಹಾಗೂ ಅರುಂಧತಿ ವಿವಾಹವಾಗಿದ್ದಾರೆ. ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರು ಭಾರತಕ್ಕೆ ಬಂದ ಬಳಿಕ ಇಂತಹ ವಿವಾಹ ಪದ್ಧತಿ ಹುಟ್ಟಿಕೊಂಡಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.