ಬೆಂಗಳೂರು: ‘ಭೂಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ರೈತರಿಗೂ ಅನುಕೂಲವಾಗಲಿದೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೂ ಸಹಕಾರ ನೀಡಬೇಕು’ ಎಂದುಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದರು.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು,‘ರೈತರ ಭೂಮಿಗೆ ಉತ್ತಮ ಬೆಲೆಸಿಗಲಿದೆ. ಕೃಷಿ ಚಟುವಟಿಕೆ ಹೆಚ್ಚಳಕ್ಕೂ ಅನುಕೂಲ ಆಗಲಿದೆ. ಕೈಗಾರಿಕೆ ಸ್ಥಾಪನೆ ಮಾಡುವವರು ಭೂಮಿ ಖರೀದಿ ಮಾಡುವುದು ಇನ್ನು ಸುಲಭ ಆಗಲಿದೆ. ಹೀಗಾಗಿಯೇ ಸುಗ್ರೀವಾಜ್ಞೆ ತರಲು ಹೊರಟಿದ್ದೇವೆ’ ಎಂದರು.
‘ಕಾಯ್ದೆಯ ಅನುಕೂಲಗಳನ್ನು ಗಮನಿಸಿಯೇ ಬಹುತೇಕರು ನಮ್ಮ ಕಾರ್ಯವನ್ನು ಸ್ವಾಗತಿಸುತ್ತಿದ್ದಾರೆ.ವಿರೋಧ ವ್ಯಕ್ತಪಡಿಸುತ್ತಿರುವ ಸಿದ್ದರಾಮಯ್ಯ ಸೇರಿ ಎಲ್ಲರಿಗೂ ಇದರ ಪ್ರಯೋಜನ ಮುಂದಿನ ದಿನಗಳಲ್ಲಿ ಅರ್ಥವಾಗಲಿವೆ. ಸಿದ್ದರಾಮಯ್ಯ ಅವರೊಂದಿಗೆ ನಾನೂ ಮಾತನಾಡಿ ಕಾಯ್ದೆಯ ಉಪಯೋಗಗಳನ್ನು ಮನವರಿಕೆ ಮಾಡಿಕೊಡುತ್ತೇನೆ’ ಎಂದು ಹೇಳಿದರು.
‘ರೈತರು ಮತ್ತು ಕೈಗಾರಿಕೋದ್ಯಮಿಗಳಿಬ್ಬರಿಗೂ ಅನುಕೂಲ ಆಗಲಿರುವ ಕಾರ್ಯಕ್ಕೆ ಪ್ರತಿಪಕ್ಷಗಳು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.