ಬೆಂಗಳೂರು: ಶ್ರೀಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಪೂಜಾ ಕಾರ್ಯಕ್ಕೆ ಮುಜಾವರ್ ನೇಮಕ ಮಾಡಿ 2018ರ ಮಾರ್ಚ್ 19ರಂದು ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಈ ವಿಷಯದಲ್ಲಿ ಉನ್ನತ ಮಟ್ಟದ ಸಮಿತಿಯ ವರದಿ ಉಲ್ಲೇಖಿಸದೆ ಕಾನೂನಿನ ಪ್ರಕಾರ ಮರುಪರಿಶೀಲನೆ ನಡೆಸುವಂತೆ ನ್ಯಾಯಮೂರ್ತಿ ಪಿ.ಎಸ್. ದಿನೇಶ್ಕುಮಾರ್ ಅವರಿದ್ದ ಪೀಠ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ನೇತೃತ್ವದ ಉನ್ನತ ಮಟ್ಟದ ಸಮಿತಿ ಸಲ್ಲಿಸಿದ ವರದಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿತ್ತು. ಗರ್ಭಗುಡಿಗೆ ಪ್ರವೇಶಿಸಿ ಹಿಂದೂ ಮತ್ತು ಮುಸ್ಲಿಮ್ ಸಮುದಾಯದವರಿಗೆ ತೀರ್ಥ ವಿತರಿಸಲು ಮುಜಾವರ್ಗೆ ಮಾತ್ರ ಅನುಮತಿ ನೀಡಿತ್ತು. ಈ ಆದೇಶವನ್ನುಶ್ರೀ ಗುರು ದತ್ತಾತ್ರೇಯ ಪೀಠ ಸಂವರ್ಧನಾ ಸಮಿತಿ ಪ್ರಶ್ನಿಸಿತ್ತು. 2010ರ ಮಾರ್ಚ್ 10ರಂದು ಮುಜರಾಯಿ ಆಯುಕ್ತರು ನೀಡಿರುವ ಎರಡನೇ ವರದಿ ಜಾರಿಗೊಳಿಸಲು ನಿರ್ದೇಶನ ನೀಡಲು ಕೋರಿತ್ತು.
‘ಸರ್ಕಾರ ಮುಕ್ತ ಮನಸಿನಿಂದ ಈ ಆದೇಶ ಮಾಡಿಲ್ಲ ಮತ್ತು ಉನ್ನತ ಮಟ್ಟದ ಸಮಿತಿ ವರದಿ ಕೂಡ ಪಕ್ಷಪಾತದಿಂದ ಮುಕ್ತವಾದಂತೆ ಕಾಣಿಸುತ್ತಿಲ್ಲ’ ಎಂದು ಪೀಠ ಅಭಿಪ್ರಾಯಪಟ್ಟಿತು.
‘ಉನ್ನತ ಮಟ್ಟದ ಸಮಿತಿ ನೇಮಿಸುವ ನಿರ್ಧಾರ ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾಗಿದೆ. ಸಮಿತಿಯ ಸದಸ್ಯರಾಗಿ ಪ್ರೊ. ರಹಮತ್ ತರೀಕೆರೆ ಇದ್ದರು. ವರದಿ ಪಕ್ಷಪಾತದಿಂದ ಕೂಡಿದೆ’ ಎಂದು ಅರ್ಜಿದಾರರ ಪರ ವಕೀಲ ಅಶೋಕ್ ಹಾರನಹಳ್ಳಿ ವಾದಿಸಿದ್ದರು.
‘1989ರಲ್ಲಿ ಮುಜರಾಯಿ ಆಯುಕ್ತರು ನೀಡಿದ್ದ ವರದಿಯನ್ನು ನ್ಯಾಯಾಲಯ ರದ್ದುಪಡಿಸಿದೆ. ಅದೇ ವರದಿ ಆಧರಿಸಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಮೊದಲನೆಯದಾಗಿ ಹಿಂದೂ ಸಮುದಾಯದವರು ತಮ್ಮ ನಂಬಿಕೆಯಂತೆ ಪೂಜೆ ಮತ್ತು ಅರ್ಚನೆ ಮಾಡುವ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಎರಡನೆಯದಾಗಿ ಮುಜಾವರ್ ತನ್ನ ನಂಬಿಕೆಗೆ ವಿರುದ್ಧ ಪಾದುಕೆ ಪೂಜೆ ಮತ್ತು ನಂದಾ ದೀಪ ಬೆಳಗಲು ಆದೇಶಿಸಿದೆ. ಎರಡೂ ಸಮುದಾಯದವರ ಹಕ್ಕನ್ನೂ ಕಸಿದುಕೊಳ್ಳಲಾಗಿದೆ. ಇದು ಸಂವಿಧಾನದ ಪರಿಚ್ಛೇದ 25ರ ಉಲ್ಲಂಘನೆ’ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.