
ಸಾಂದರ್ಭಿಕ ಚಿತ್ರ
– ಐಸ್ಟಾಕ್ ಚಿತ್ರ
ಚಾಮರಾಜನಗರ: ಆರು ತಿಂಗಳ ಹೆಣ್ಣು ಮಗುವನ್ನು ₹ 50 ಸಾವಿರಕ್ಕೆ ಮಾರಾಟ ಮಾಡಿದ ಆರೋಪದ ಮೇರೆಗೆ ಪೋಷಕರು ಸೇರಿ ಐವರನ್ನು ಬಂಧಿಸಿ, ಮಗುವನ್ನು ರಕ್ಷಿಸಲಾಗಿದೆ.
ಮಗುವನ್ನು ಮಾರಾಟ ಮಾಡಿದ್ದ ಇಲ್ಲಿನ ರಾಮಸಮುದ್ರದ ದಂಪತಿ, ಮಗುವನ್ನು ಪಡೆದಿದ್ದ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಕೊಣನೂರಿನ ದಂಪತಿ ಹಾಗೂ ಮೈಸೂರಿನ ಚೆಲುವಾಂಬ ಆಸ್ಪತ್ರೆಯ ಡಿ ಗ್ರೂಪ್ ನೌಕರರಾದ ಮಧ್ಯವರ್ತಿ ಶಾಂತಾ ಬಂಧಿತರು.
‘ಜುಲೈ 26ರಂದು ಜಿಲ್ಲಾಸ್ಪತ್ರೆಯಲ್ಲಿ ಜನಿಸಿದ ಬಳಿಕ ದಂಪತಿ ಬಳಿ ಮಗು ಕಾಣದ ಬಗ್ಗೆ ದೂರು ಬಂದ ಮೇರೆಗೆ ವಿಚಾರಣೆ ನಡೆಸಲಾಯಿತು. ಆಗ ಪ್ರಕರಣ ಬೆಳಕಿಗೆ ಬಂತು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜ್ ತಿಳಿಸಿದರು.
‘ಮಗು ಆರೋಗ್ಯದಿಂದಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಶಕ್ಕೆ ಒಪ್ಪಿಸಲಾಗಿದೆ. ಹೆಚ್ಚುವರಿ ಎಸ್ಪಿ ಎಂ.ಎನ್.ಶಶಿಧರ್, ಡಿವೈಎಸ್ಪಿ ಸ್ನೇಹ ರಾಜ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್ ಎಂ.ಜಗದೀಶ್, ಪಿಎಸ್ಐ ಆರ್.ಮಂಜುನಾಥ್ ಪಾಲ್ಗೊಂಡಿದ್ದರು. ತಂಡಕ್ಕೆ ಬಹುಮಾನ ನೀಡಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.