ಮೈಸೂರು: ಮೈಸೂರು ರಂಗಾಯಣದಲ್ಲಿ ಫೆ. 13ರಿಂದ 19ರವರೆಗೆ ನಡೆಯಲಿರುವ ‘ಬಹುರೂಪಿ‘ ರಾಷ್ಟ್ರೀಯ ನಾಟಕೋತ್ಸವವನ್ನು ನಟ ಅನಂತನಾಗ್ ಉದ್ಘಾಟಿಸುವರು.
‘ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನದ ವರ್ಷಾಚರಣೆ ಪ್ರಯುಕ್ತ, ಈ ಬಾರಿ ನಾಟಕೋತ್ಸವ ಕ್ಕೆ ‘ಗಾಂಧಿ ಪಥ’ ಎಂಬ ವಿಷಯ ಆಯ್ಕೆ ಮಾಡಿಕೊಳ್ಳಲಾಗಿದೆ. ‘ಗಾಂಧಿ ಅವರ ಸತ್ಯ, ಆಧುನಿಕ ರಂಗಭೂಮಿ ಪರಂಪರೆಗೆ ದಕ್ಕಬೇಕು ಎಂಬುದು ಇದರ ಉದ್ದೇಶ’ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಗಾಂಧೀಜಿ ವಿಚಾರಗಳು ಅಪ್ರಸ್ತುತವೇ ಎಂಬ ಪ್ರಶ್ನೆಗಳು ಮೂಡತೊಡಗಿವೆ. ಪ್ರಸ್ತುತತೆ ಮತ್ತು ಅಪ್ರಸ್ತುತತೆ ಸಹ ಇದರಲ್ಲಿ ಚರ್ಚೆಯಾಗಲಿವೆ. ಎಲ್ಲ ಪಂಥಗಳನ್ನು ಮೀರಿ ಪಥಗಳತ್ತ ಹೆಜ್ಜೆ ಹಾಕುವುದು ನಾಟಕೋತ್ಸವದ ಉದ್ದೇಶ’ ಎಂದು ಹೇಳಿದರು.
ನಿರ್ದೇಶಕ ಗಿರೀಶ ಕಾಸರವಳ್ಳಿ ಚಲನಚಿತ್ರೋತ್ಸವ ಉದ್ಘಾಟಿಸುವರು. ಫೆ.13ರಂದು ಜನಪದ ಉತ್ಸವವನ್ನು ಜಾನಪದ ಅಕಾಡೆಮಿ ಅಧ್ಯಕ್ಷರಾದ ಮಂಜಮ್ಮ ಜೋಗತಿ ಉದ್ಘಾಟಿಸಲಿದ್ದಾರೆ. 16 ಮತ್ತು 17ರಂದು ‘ಗಾಂಧಿ ಪಥ’ ಶೀರ್ಷಿಕೆಯವಿಚಾರ ಸಂಕಿರಣಕ್ಕೆ ಕವಿ ಸಿದ್ದಲಿಂಗಯ್ಯ ಚಾಲನೆ ನೀಡುವರು ಎಂದು ಮಾಹಿತಿ ನೀಡಿದರು.
ಈ ಬಾರಿ ‘ಬಹುರೂಪಿ’ಯಲ್ಲಿ ಒಟ್ಟು 24 ನಾಟಕಗಳು ಪ್ರದರ್ಶನ ಕಾಣಲಿದ್ದು, ಕನ್ನಡದ್ದೇ 10 ನಾಟಕಗಳು ಇರಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.