ADVERTISEMENT

ಜೈಲಿನ ಅನುಭವ ಇದೆ ಎಂದು ಬಂಧಿಸಿ ಎನ್ನುತ್ತಿದ್ದೀರಾ: ಡಿಕೆಶಿಗೆ ಬಿಜೆಪಿ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಫೆಬ್ರುವರಿ 2022, 11:04 IST
Last Updated 23 ಫೆಬ್ರುವರಿ 2022, 11:04 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ‘ನನ್ನನ್ನು ಬಂಧಿಸಿ’ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ, ಜೈಲು ಹಕ್ಕಿಯ ಅನುಭವ ಇದೆ ಎಂಬ ಕಾರಣಕ್ಕಾಗಿ ಬಂಧಿಸಿ ಎನ್ನುತ್ತಿದ್ದೀರಾ ಎಂದು ಪ್ರಶ್ನಿಸಿದೆ.

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಮ್ಮನ್ನು ತಾವೇ ವಿಜೃಂಭಿಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ. ನನ್ನನ್ನು ಬಂಧಿಸಿ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಡಿಕೆಶಿಯವರೇ ಇದೇನಿದು, ಸಹಾನುಭೂತಿ ಗಿಟ್ಟಿಸಿಕೊಳ್ಳುವ ಹೊಸ ತಂತ್ರವೇ? ಅಥವಾ ಜೈಲು ಹಕ್ಕಿಯ ಅನುಭವ ಇದೆ ಎಂಬ ಕಾರಣಕ್ಕಾಗಿ ಬಂಧಿಸಿ, ಬಂಧಿಸಿ ಎನ್ನುತ್ತಿದ್ದೀರಾ?’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೆಲವರನ್ನು ಬಂಧಿಸಿದ್ದಾರೆ. ಘಟನೆಗೆ ನನ್ನ ಪ್ರಚೋದನೆ ಇದೆ ಎಂದು ಹೇಳುತ್ತಿರುವುದರಿಂದ ನನ್ನನ್ನು ಬಂಧಿಸಲಿ. ಸಚಿವರೇ ನಿಷೇಧಾಜ್ಞೆ ಮುರಿದು ಮೆರವಣಿಗೆ ನಡೆಸಿ ಕಲ್ಲು ಹೊಡೆಸಿದ್ದಾರಲ್ಲ, ಅವರ ಮೇಲೆ ಪ್ರಕರಣ ಏಕಿಲ್ಲ? ಇದಕ್ಕೆ ಖಾಕಿ ತೊಟ್ಟವರು ಉತ್ತರಿಸಬೇಕು ಎಂದು ಡಿ.ಕೆ. ಶಿವಕುಮಾರ್ ಹೇಳಿರುವುದನ್ನು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.