ಬೆಂಗಳೂರು: ‘ಕೋಟ್ಯಂತರ ಜನರಿಗೆ ಅನ್ನ, ಅಕ್ಷರ ಮತ್ತು ಆಶ್ರಯ ನೀಡುವ ಮೂಲಕ ಅವುಗಳ ಮಹತ್ವವನ್ನುವಿಶ್ವಕ್ಕೆ ಸಾರಿದ ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ಶಿವಕುಮಾರ ಸ್ವಾಮೀಜಿ ಸಮಾಜದ ಎರಡು ಕಣ್ಣುಗಳು ಇದ್ದಂತೆ’ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ವಿ.ಸೋಮಣ್ಣ ಪ್ರತಿಷ್ಠಾನದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಬಾಲಗಂಗಾಧರನಾಥ ಸ್ವಾಮಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬಾಲಗಂಗಾಧರನಾಥ ಸ್ವಾಮೀಜಿ ನನ್ನ ಜೀವನಕ್ಕೆ ಶಕ್ತಿ ತುಂಬಿ, ಇಂದು ಸಚಿವನಾಗಿ ಸಮಾಜ ಸೇವೆ ಮಾಡಲು ಪ್ರೇರಣೆ ನೀಡಿದರು. 29 ವರ್ಷಗಳಿಂದ ಪಾಳು ಬಿದ್ದ ಜಾಗವನ್ನು ಸುಂದರವಾದ ಬಿ.ಜಿ.ಎಸ್.ಕ್ರೀಡಾಂಗಣ ಮಾಡಲು ಅವರ ಆಶೀರ್ವಾದವೇ ಕಾರಣ’ ಎಂದರು.
‘ಅವರ ಮಾರ್ಗದರ್ಶನದಿಂದ ದೀಪಾಂಜಲಿ ನಗರದ ಕೊಳೆಗೇರಿ ಅಭಿವೃದ್ಧಿ, ಬಾಳಯ್ಯನ ಕೆರೆ ಸಂರಕ್ಷಣೆ ಹಾಗೂ 2 ಕೋಟಿ ಸಸಿ ನೆಡುವ ಕಾರ್ಯಗಳು ಯಶಸ್ವಿಯಾದವು’ ಎಂದು ಹೇಳಿದರು.
ಬೇಲಿಮಠದ ಶಿವರುದ್ರ ಸ್ವಾಮೀಜಿ,‘ಗುರುಗಳ ಬಳಿ ಸೇವಾ ಮನೋಭಾವದಿಂದ ಸಮರ್ಪಣೆ ಮಾಡಿದವರಿಗೆ ಅವರ ಸಂಪೂರ್ಣ ಆಶೀರ್ವಾದ ಲಭಿಸುತ್ತದೆ. ನಾನು ಎಂಬುದನ್ನು ಬಿಟ್ಟರೆ ಸಮಾಜದ ಅಭಿವೃದ್ದಿ ಸಾಧ್ಯ’ ಎಂದರು.
ಆದಿಚುಂಚನಗಿರಿ ವಿಜಯನಗರ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ,‘ಸಮಾಜ ಸುಧಾರಣೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವಬಾಲಗಂಗಾಧರನಾಥ ಸ್ವಾಮೀಜಿ ಜಾತಿ, ಮತಗಳನ್ನು ನೋಡದೆ ಸಮಾಜಕ್ಕೆ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದರು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.