ಜಿ. ಪರಮೇಶ್ವರ, ಗೃಹ ಸಚಿವ
ಬೆಂಗಳೂರು: ‘200ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರನ್ನು ರಾಜ್ಯದಿಂದ ಗಡಿಪಾರು ಮಾಡಲಾಗಿದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿಗಳು (ಎಫ್ಆರ್ಆರ್ಒ) ಅಕ್ರಮ ವಲಸಿಗರನ್ನು ಗುರುತಿಸಿ ಮಾಹಿತಿ ನೀಡುತ್ತಾರೆ. ಗುಜರಾತ್ ರೀತಿಯಲ್ಲಿ ಅಕ್ರಮ ನುಸುಳುಕೋರರನ್ನು ನಾವೂ ವಾಪಸ್ ಕಳುಹಿಸುತ್ತೇವೆ’ ಎಂದರು.
ಗುಜರಾತ್ನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ದೇಶಿಯರನ್ನು ಪತ್ತೆ ಮಾಡಿ ಭಾರತದಿಂದ ಹೊರಗೆ ಕಳುಹಿಸುವ ಬೃಹತ್ ಕಾರ್ಯಾಚರಣೆಯನ್ನು ಕಳೆದ ಏಪ್ರಿಲ್ ತಿಂಗಳಿನಲ್ಲಿ ಅಲ್ಲಿನ ಪೊಲೀಸರು ಮಾಡಿದ್ದರು.
‘ಅಕ್ರಮ ವಲಸಿಗರು ಕಟ್ಟಡ ಕಾರ್ಮಿಕರಾಗಿ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆಂಬ ಮಾಹಿತಿಯಿದೆ. ಅದನ್ನು ಪರಿಶೀಲಿಸಿ, ಅಂಥವರು ಕಂಡುಬಂದರೆ ವಶಕ್ಕೆ ತೆಗೆದುಕೊಂಡು ಗಡಿಪಾರು ಮಾಡಲಾಗುವುದು’ ಎಂದು ಪರಮೇಶ್ವರ ಹೇಳಿದರು.
ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ‘ಅಕ್ರಮ ನುಸುಳುಕೋರರ ಬಗ್ಗೆ ಮೃದುಧೋರಣೆ ತೋರಿ ಏನು ಪ್ರಯೋಜನವಿದೆ. ಬಾಂಗ್ಲಾ ದೇಶದವರನ್ನು ಕರೆಸಿಕೊಂಡು ಮತ ಹಾಕಿಸಿಕೊಳ್ಳುವಂಥ ಪರಿಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ಬಂದಿಲ್ಲ’ ಎಂದರು.
‘ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಕಳೆದ ವಾರ ನನ್ನನ್ನು ಭೇಟಿಗೆ ಕರೆದಿದ್ದರು. ಆಗ ನಾನು ಊರಲ್ಲಿದ್ದೆ. ಹೀಗಾಗಿ ಭೇಟಿ ಸಾಧ್ಯವಾಗಿರಲಿಲ್ಲ. ಮತ್ತೆ ಕರೆದರೆ ಭೇಟಿಯಾಗುತ್ತೇನೆ’ ಎಂದರು.
‘ಡಿ.ಕೆ. ಶಿವಕುಮಾರ್ ಅವರಿಗೆ ಉನ್ನತ ಸ್ಥಾನ ಸಿಗಬೇಕು’ ಎಂಬ ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ, ‘ತಮ್ಮ ಅಭಿಪ್ರಾಯವನ್ನು ಶ್ರೀಗಳು ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.