ವಿಜಯಪುರ: ‘ಶಾಸಕ ಮಹೇಶ ಕುಮಠಳ್ಳಿ ಅವರಿಗೆ ಸಚಿವ ಸ್ಥಾನ ನೀಡಲೇಬೇಕು. ಇಲ್ಲವಾದಲ್ಲಿ ಮುಖ್ಯಮಂತ್ರಿ ವಚನ ಭ್ರಷ್ಟರಾಗುತ್ತಾರೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಉಪ ಚುನಾವಣೆ ಪ್ರಚಾರ ವೇದಿಕೆಯಲ್ಲಿ ಕುಮಠಳ್ಳಿ ಅವರನ್ನು ಸಚಿವರನ್ನಾಗಿ ಮಾಡುತ್ತೇವೆ ಎಂದು ಸಿಎಂ ಹೇಳಿದ್ದರು. ನಾನು ಕೂಡ, ಕುಮಠಳ್ಳಿ ಅವರನ್ನು ಸಚಿವರನ್ನಾಗಿ ಮಾಡುತ್ತೇವೆ ಎಂದು ಭಾಷಣ ಮಾಡಿದ್ದೆ. ಹೀಗಾಗಿ, 10 ಜನರಿಗೆ ಸಚಿವ ಸ್ಥಾನ ಕೊಟ್ಟಂತೆ ಕುಮಠಳ್ಳಿಗೂ ಕೊಡಬೇಕು’ ಎಂದು ಆಗ್ರಹಿಸಿದರು.
‘ಹಿಂದೆ ಎಚ್.ಡಿ.ಕುಮಾರಸ್ವಾಮಿ ವಚನ ಭ್ರಷ್ಟ ಅಂತ ಬೈಯುತ್ತಿದ್ದರು. ಈಗ ಕುಮಠಳ್ಳಿ ಅವರಿಗೆ ಸಚಿವ ಸ್ಥಾನ ಕೊಡದ ಕಾರಣ ವಿರೋಧ ಪಕ್ಷಗಳು ನಮಗೆ ಬೈಯುತ್ತವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕುಮಠಳ್ಳಿ ಕೂಡ ತ್ಯಾಗ ಮಾಡಿದ್ದಾರೆ. ಅವರಿಗೆ ಬಾಯಿ ಇಲ್ಲ, ಸಂಭಾಯಿತರು ಎಂಬ ಕಾರಣಕ್ಕೆ ಕೊಡುವುದಿಲ್ಲವೇ’ ಎಂದು ಖಾರವಾಗಿ ಪ್ರಶ್ನಿಸಿದರು.
‘ಎಂಎಸ್ಐಎಲ್ ಅಧ್ಯಕ್ಷ ಸ್ಥಾನ ಬೇಡ ಎಂಬ ಕುಮಠಳ್ಳಿ ಹೇಳಿಕೆ ಸರಿಯಾಗಿದೆ. ಪಾಪ ಕುಮಠಳ್ಳಿ ಮದ್ಯ ಸೇವನೆ ಮಾಡುವುದಿಲ್ಲ. ಅಂತಹವರಿಗೆ ಎಂಎಸ್ಐಎಲ್ ಕೊಟ್ಟರೆ ಏನು ಪ್ರಯೋಜನ’ ಎಂದು ವ್ಯಂಗ್ಯವಾಡಿದರು.
‘ದೆಹಲಿ ಫಲಿತಾಂಶ ನಿರೀಕ್ಷೆಯಂತೆ ಬಂದಿದೆ. ಸಮೀಕ್ಷೆಗಳೂ ಇದನ್ನೇ ಹೇಳಿದ್ದವು. ಲೋಕಸಭೆ ಚುನಾವಣೆಯಲ್ಲಿ ಏಳು ಜನ ಬಿಜೆಪಿ ಸಂಸದರು ಆಯ್ಕೆಯಾಗಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಸ್ಥಳೀಯ ಸಮಸ್ಯೆಗಳ ಆಧಾರದ ಮೇಲೆ ಆಮ್ ಆದ್ಮಿ ಪಾರ್ಟಿಗೆ ಜನಾದೇಶ ಸಿಕ್ಕಿದೆ. ಮತಯಂತ್ರಗಳ ಬಗ್ಗೆ ಸುಳ್ಳು ಸುದ್ದಿ ಹರಡಿದ್ದ ವಿರೋಧ ಪಕ್ಷಗಳ ನಾಯಕರು ಈಗ ಬೇಷರತ್ತಾಗಿ ಕ್ಷಮೆಯಾಚಿಸಬೇಕು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ರಮೇಶ ಜಾರಕಿಹೊಳಿ ಅವರಿಗೆ ಈ ಹಿಂದೆ ಅಪಮಾನವಾಗಿತ್ತು. ಡಿಕೆಶಿ ಮುಂದೆ ತಾವು ಏನು ಎಂಬುದನ್ನು ತೋರಿಸಬೇಕಿತ್ತು. ಹೀಗಾಗಿ, ಡಿಕೆಶಿ ಬಳಿಯಿದ್ದ ಖಾತೆಯನ್ನೇ ಪಡೆದಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.