ಬೆಂಗಳೂರು: ‘ಬಿಬಿಎಂಪಿ ದಕ್ಷಿಣ ವಿಭಾಗದ ಜಂಟಿ ಆಯುಕ್ತರಾಗಿದ್ದ ಕೆಎಎಸ್ ಅಧಿಕಾರಿ ವೀರಭದ್ರಸ್ವಾಮಿ ಅವರು ಸುಳ್ಳು ಹೇಳಿ ತನ್ನನ್ನು ವಿವಾಹವಾಗಿದ್ದಾರೆ’ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಈ ಸಂಬಂಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘2020ರಲ್ಲಿ ವೀರಭದ್ರಸ್ವಾಮಿ ಅವರ ಪರಿಚಯವಾಗಿತ್ತು. ನನ್ನ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ ಅವರು ಕೆಲ ದಿನಗಳ ನಂತರ ವಿವಾಹದ ಪ್ರಸ್ತಾಪ ಮುಂದಿಟ್ಟಿದ್ದರು. ಮೊದಲನೆ ಪತ್ನಿ ಹಾಗೂ ಕುಟುಂಬದಿಂದ 11 ವರ್ಷಗಳಿಂದ ದೂರ ಇರುವುದಾಗಿಯೂ ನಂಬಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.
‘ಈ ವರ್ಷದ ಫೆಬ್ರುವರಿ 14ರಂದು ಹುಳಿಮಾವು–ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿರುವ ದೇವಸ್ಥಾನವೊಂದರಲ್ಲಿ ಕುಟುಂಬದವರು ಹಾಗೂ ಆಪ್ತರ ಸಮ್ಮುಖದಲ್ಲಿ ನನ್ನನ್ನು ವಿವಾಹವಾಗಿದ್ದ ಅವರು ನಮ್ಮ ಮನೆಯಲ್ಲೇ ವಾಸವಿದ್ದರು. ಅದಾದ ನಂತರ ಆಗಾಗ ಮೊದಲ ಪತ್ನಿ ಮನೆಗೂ ಹೋಗಿ ಬರುತ್ತಿದ್ದರು. ಈ ಕುರಿತು ಪ್ರಶ್ನಿಸಿದ ನಂತರ ಅವರು ನಾಪತ್ತೆಯಾಗಿದ್ದಾರೆ. ಮೊಬೈಲ್ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದೂ ದೂರಿನಲ್ಲಿ ವಿವರಿಸಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ಪಡೆಯಲು ವೀರಭದ್ರಸ್ವಾಮಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲಾಯಿತು. ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.