
ಬಸವರಾಜ ಹೊರಟ್ಟಿ
ಹಾವೇರಿ: ‘ಸಭಾಪತಿ ಸ್ಥಾನದಲ್ಲಿ ಕುಳಿತವರಿಗೆ ತಾಳ್ಮೆ ಹೆಚ್ಚಿರಬೇಕು. ಮೊದಲೆಲ್ಲ ಶಾಸಕರು ಕೈ ಎತ್ತಿ ಮಾತನಾಡಲು ಅವಕಾಶ ಕೇಳುತ್ತಿದ್ದರು. ಈಗ ಕೈ– ಕಾಲು ಏನು ಇಲ್ಲ. ಎದ್ದು ನಿಂತು ಅವರವರೇ ಮಾತನಾಡುತ್ತಾರೆ. ನಾನು ಮಂಗ್ಯಾನ್ ತರ ಕುಂತಿರುತ್ತೇನೆ’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅನುಭವ ಹಂಚಿಕೊಂಡರು.
ನಗರದಲ್ಲಿರುವ ಜಿಲ್ಲಾ ಗುರುಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ನನಗೂ ತಾಳ್ಮೆಯಿಂದ ಇದ್ದು ಸಾಕಾಗಿತ್ತು. ‘ದನ ಕಾಯಲು ಹೋಗಿ’ ಎಂದು ಬೈದೆ. ಅಷ್ಟಕ್ಕೆ ಅವರು ಕೊಠಡಿಗೆ ಬಂದು ಪ್ರಶ್ನಿಸಿದರು. ನನ್ನ ಮ್ಯಾನೇಜರ್ ಗ್ರಾಮದಲ್ಲಿ ಚಿತ್ರೀಕರಿಸಿದ್ದ ದನ ಕಾಯುವವರ ವಿಡಿಯೊವನ್ನು ಅವರಿಗೆ ತೋರಿಸಿದೆ. ಅವರಿಗೂ ನಿಮಗೂ ಏನು ವ್ಯತ್ಯಾಸ ? ಎಂದು ಪ್ರಶ್ನಿಸಿದಾಗ ವಾಪಸು ಹೋದರು. ಕಡತದಿಂದ ಪದ ತೆಗೆಯುವುದಿಲ್ಲವೆಂದು ಹೇಳಿದೆ’ ಎಂದರು.
‘ಚುನಾಯಿತರಾದವರು ಸಹ ಜವಾಬ್ದಾರಿ ವಹಿಸಿಕೊಳ್ಳುತ್ತಿಲ್ಲ. ಅವರ ಮೇಲೆ ಇವರು, ಇವರ ಮೇಲೆ ಅವರು ಹೇಳುತ್ತಾರೆ. ಮೊನ್ನೆ ಅಧಿವೇಶನ ಮುಗಿಯಲು ಎರಡು ದಿನ ಬಾಕಿಯಿತ್ತು. ಪ್ರಶ್ನೆಯೊಂದಕ್ಕೆ ಉತ್ತರ ನೀಡಲು ಇಬ್ಬರು ದೊಡ್ಡ ಸಚಿವರಿಗೆ ಹೇಳಿದ್ದೆ. ಅವರು 15 ದಿನ ಕಾಲಾವಕಾಶ ಕೇಳಿದರು. ಎರಡು ದಿನ ಅಧಿವೇಶನ ಇರುವುದು ಗೊತ್ತಿದ್ದರೂ 15 ದಿನ ಕಾಲಾವಕಾಶ ಕೇಳುವ ಅವರಿಗೆ ಏನು ಹೇಳಬೇಕು’ ಎಂದು ವ್ಯವಸ್ಥೆ ಬಗ್ಗೆ ಬೇಸರ ಹೊರಹಾಕಿದರು.
‘ರಾಜ್ಯದಲ್ಲಿ ತರುತ್ತಿರುವ ದ್ವಿಭಾಷಾ ನೀತಿಯನ್ನು ನಾನು ಒಪ್ಪುವುದಿಲ್ಲ. ತ್ರಿಭಾಷಾ ಕಲಿಕೆಯೇ ಇರಬೇಕು. ನಾನು ಇದ್ದಾಗ ಡ್ರಾಯಿಂಗ್, ಟೈಲರಿಂಗ್, ಇತರೆ ವಿಷಯಗಳಿದ್ದವು. ಒಂದೊಂದೇ ತೆಗೆದರು. ಈಗ ದ್ವಿಭಾಷಾ ಮಾಡಲು ಹೊರಟಿದ್ದಾರೆ. ಇದಕ್ಕೆ ನನ್ನ ವಿರೋಧವಿದೆ’ ಎಂದು ಹೇಳಿದರು.
ಅನುಮತಿ ಕೇಳಿದ ಭೋಜೇಗೌಡ
‘ಸರ್ಕಾರದ ದುಡ್ಡಿನಲ್ಲಿ ಶಾಸಕರು ವಿದೇಶಕ್ಕೆ ಹೋಗಬೇಕಾದರೆ ಅನುಮತಿ ಪಡೆಯಬೇಕು. ವೈಯಕ್ತಿಕವಾಗಿ ಸ್ವಂತ ದುಡ್ಡಿನಲ್ಲಿ ಹೋಗುವುದಾದರೆ ಅನುಮತಿ ಪಡೆಯುವ ಅಗತ್ಯವಿಲ್ಲ. ಭೋಜೇಗೌಡರು ಮಾತ್ರ ದಕ್ಷಿಣ ಆಫ್ರಿಕಾ ದೇಶಕ್ಕೆ ಹೋಗಬೇಕೆಂದು ಅನುಮತಿ ಕೇಳಿದ್ದಾರೆ’ ಎಂದು ಬಸವರಾಜ ಹೊರಟ್ಟಿ ತಿಳಿಸಿದರು.
‘22 ಜನ ಹೊರಟಿರುವ ಮಾಹಿತಿಯಿದೆ. ಭೋಜೇಗೌಡರನ್ನು ಬಿಟ್ಟು, ಉಳಿದವರು ಯಾರಾದರೂ ಅನುಮತಿ ಕೇಳಿದರೆ ಕಡತ ಬಂದ ಮೇಲೆ ಪರಿಶೀಲಿಸುವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.