ADVERTISEMENT

ಪೊಲೀಸ್‌ ನೌಕರಿ ಗಿಟ್ಟಿಸಿದ ಬಿ.ಇ.,ಎಂಬಿಎ, ಡಿಪ್ಲೊಮಾ ಪದವೀಧರರು!

ವಿದ್ಯಾರ್ಹತೆಗೆ ತಕ್ಕಂತೆ ಸಿಗದ ನೌಕರಿ; ಆಸರೆಯಾದ ಪೊಲೀಸ್‌ ಇಲಾಖೆ

ಬಸವರಾಜ ಸಂಪಳ್ಳಿ
Published 16 ಮಾರ್ಚ್ 2021, 19:30 IST
Last Updated 16 ಮಾರ್ಚ್ 2021, 19:30 IST
ವಿಜಯಪುರದ ಪೊಲೀಸ್‌ ಕವಾಯತು ಮೈದಾನದಲ್ಲಿ ಮಂಗಳವಾರ ನಡೆದ ನಿರ್ಗಮನ ಪಥ ಸಂಚಲನದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ  ಸಶಸ್ತ್ರ ಮೀಸಲು ಪಡೆ ಹಾಗೂ ಕಾರಾಗೃಹ ವೀಕ್ಷಕ ಪ್ರಶಿಕ್ಷಣಾರ್ಥಿಗಳು–ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಯಪುರದ ಪೊಲೀಸ್‌ ಕವಾಯತು ಮೈದಾನದಲ್ಲಿ ಮಂಗಳವಾರ ನಡೆದ ನಿರ್ಗಮನ ಪಥ ಸಂಚಲನದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ  ಸಶಸ್ತ್ರ ಮೀಸಲು ಪಡೆ ಹಾಗೂ ಕಾರಾಗೃಹ ವೀಕ್ಷಕ ಪ್ರಶಿಕ್ಷಣಾರ್ಥಿಗಳು–ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ   

ವಿಜಯಪುರ: ಪೊಲೀಸ್‌ ಕಾನ್‌ಸ್ಟೆಬಲ್‌, ಕಾರಾಗೃಹ ವೀಕ್ಷಕ ಹುದ್ದೆ ಎಂದರೆ ಯಾರಿಗೂ ಬೇಡವಾದ ಹಾಗೂ ಬಹುತೇಕವಾಗಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಓದಿದವರಿಗೆ, ಹೆಚ್ಚೆಂದರೆ ಬಿಎ ಪಾಸಾದವರಿಗೆಮೀಸಲು ಎಂಬ ಬಾವನೆ ಈ ಮೊದಲಿತ್ತು. ಆದರೆ, ಇದೀಗ ಬದಲಾದ ಕಾಲಘಟ್ಟದಲ್ಲಿ ಎಂಜಿನಿಯರಿಂಗ್‌, ಎಂಬಿಎ, ಡಿಪ್ಲೊಮಾ, ಎಂಎಸ್ಸಿ, ಬಿಕಾಂ, ಬಿ.ಇಡಿ ಪದವೀಧರರು ಈ ನೌಕರಿಗೆ ಮುಗಿಬೀಳತೊಡಗಿದ್ದಾರೆ.

ಹೌದು, ಇದಕ್ಕೆ ಸಾಕ್ಷಿ ಎಂಬಂತೆ ವಿಜಯಪುರದ ಪೊಲೀಸ್‌ ಕವಾಯತು ಮೈದಾನದಲ್ಲಿ ಮಂಗಳವಾರ ನಡೆದ ಸಶಸ್ತ್ರ ಮೀಸಲು ಪಡೆ ಹಾಗೂಕಾರಾಗೃಹ ವೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಹತೆ ಹೊಂದಿರುವವರಿಗಂತ ಬಿ.ಇ, ಎಂಬಿಎ, ಬಿಬಿಎ, ಡಿಪ್ಲೊಮಾ, ಬಿ.ಇಡಿ ಪದವೀಧರರೇಹೆಚ್ಚಾಗಿ ಕಂಡುಬಂದರು.

ವಿಜಯಪುರ ತಾತ್ಕಾಲಿಕ ಪೊಲೀಸ್‌ ತರಬೇತಿ ಕೇಂದ್ರದಲ್ಲಿ ಸಶಸ್ತ್ರ ಪೊಲೀಸ್ ತರಬೇತಿ ಮುಗಿಸಿ, ಕರ್ತವ್ಯಕ್ಕೆ ಹಾಜರಾಗಲು ಅಣಿಯಾಗಿರುವ 68 ಜನ ಪ್ರಶಿಕ್ಷಣಾರ್ಥಿಗಳಲ್ಲಿ ಎರಡು ಜನ ಬಿಇ, ಇಬ್ಬರು ಎಂಎ, ಒಬ್ಬ ಡಿಪ್ಲೊಮಾ, ಒಬ್ಬ ಎಂ.ಕಾಂ,18 ಜನ ಬಿ.ಕಾಂ, ಇಬ್ಬರುಬಿ.ಎಸ್‌ಸಿ,30 ಜನ ಬಿಎ ಪದವೀಧರರು ಇದ್ದರು.

ADVERTISEMENT

ಅದೇ ರೀತಿ, ಬಾಗಲಕೋಟೆ ತಾತ್ಕಾಲಿಕ ಪೊಲೀಸ್‌ ತರಬೇತಿ ಶಾಲೆಯಲ್ಲಿ ಕಾರಾಗೃಹ ವೀಕ್ಷಕರಾಗಿ ತರಬೇತಿ ಪಡೆದ 58 ಜನರಲ್ಲಿ 24 ಜನ ಬಿ.ಇ., ಇಬ್ಬರು ಎಂಬಿಎ, ಒಬ್ಬ ಬಿಬಿಎ, ಒಬ್ಬ ಎಂಎ, ಒಬ್ಬ ಬಿ.ಇಡಿ, 7 ಜನ ಬಿ.ಕಾಂ, ಎರಡು ಜನ ಬಿಎಸ್‌ಸಿ,ಒಬ್ಬ ಬಿಎ ಪದವೀಧರರು ಇದ್ದರು.

‘ಕೆಲಸಕ್ಕಾಗಿ ಹತ್ತಾರು ಕಡೆ ಅಲೆದಾಡಿದೆ ನನ್ನ ಪದವಿಗೆ ತಕ್ಕ ಕೆಲಸ ಎಲ್ಲೂ ಸಿಗಲಿಲ್ಲ. ಹೀಗಾಗಿ ಜೀವನ ಭದ್ರತೆಗಾಗಿ ಪೊಲೀಸ್‌ ಕೆಲಸಕ್ಕೆ ಸೇರಿದ್ದೇನೆ. ಮುಂದೆ ಉನ್ನತ ಹುದ್ದೆ ಸೇರ್ಪಡೆಗೆ ಪ್ರಯತ್ನಿಸುತ್ತೇನೆ’ ಎಂದುಕಾರಾಗೃಹ ವೀಕ್ಷಕ ಪ್ರಶಿಕ್ಷಣಾರ್ಥಿ ತರಬೇತಿ ಮುಗಿಸಿದಮೈಸೂರು ಜಿಲ್ಲೆ ನಂಜನಗೂಡಿನ ಹೆಮ್ಮರಗಾಲದಬಿ.ಇ ಮೆಕ್ಯಾನಿಕಲ್‌ ಪದವೀಧರ ಸತೀಶ ಎಚ್‌.ಆರ್‌.‘ಪ್ರಜವಾಣಿ’ಗೆ ಪ್ರತಿಕ್ರಿಯಿಸಿದರು.

‘ಕುಟುಂಬ ನಿರ್ವಹಣೆ ಜವಾಬ್ದಾರಿ ನನ್ನ ಮೇಲಿದೆ. ಹೀಗಾಗಿ ಕೆಲಸ ಅನಿವಾರ್ಯವಿತ್ತು. ಸರ್ಕಾರಿ ಕೆಲಸ ಎಂಬ ಕಾರಣಕ್ಕೆ ಕಾರಾಗೃಹ ವೀಕ್ಷಕ ಕೆಲಸಕ್ಕೆ ಸೇರಿದ್ದೇನೆ’ ಎಂದುಬಿ.ಇ.ಮೆಕ್ಯಾನಿಕಲ್‌ ಪದವೀಧರ, ಬಾಗಲಕೋಟೆ ಜಿಲ್ಲೆಯ ಗೂಡೂರಿನ ಮಂಜುನಾಥ ಗೊಣ್ಣಾಗರ ಹೇಳಿದರು.

‘ಸಣ್ಣ ನೌಕರಿಯೇ ಆದರೂ ಸರ್ಕಾರಿ ಕೆಲಸ ಜೀವನಕ್ಕೆ ಭದ್ರತೆ ನೀಡುತ್ತದೆ. ಈ ಕೆಲಸದಲ್ಲಿ ಇದ್ದುಕೊಂಡೇ ಮುಂದೆ ಉನ್ನತ ಹುದ್ದೆಗಳ ಆಯ್ಕೆಗೂ ಪ್ರಯತ್ನಿಸಲು ಅವಕಾಶವಿದೆ. ಈಗಿನ ಪರಿಸ್ಥಿತಿಯಲ್ಲಿನಮ್ಮ ವಿದ್ಯಾರ್ಹತೆಗೆ ತಕ್ಕ ಕೆಲಸ ಎಲ್ಲಿಯೂ ಸಿಗುವುದಿಲ್ಲ’ ಎಂದು ಪೊಲೀಸ್‌ ಇಲಾಖೆಗೆ ಹೊಸದಾಗಿ ಸೇರ್ಪಡೆಯಾದ ಶಿಕಾರಿಪುರ ತಾಲ್ಲೂಕಿನ ಮಾರುವಳ್ಳಿಯ ಬಿ.ಕಾಂ ಪದವೀಧರ ಸಂಜೀವ್ ಎಚ್‌, ಹಾಸನ ಜಿಲ್ಲೆಯ ಹಗಲಳ್ಳಿಯ ಬಿ.ಇ.ಮೆಕ್ಯಾನಿಕಲ್‌ ಪದವೀಧರ ಸಚಿನ್‌ ಎ.ಎಸ್‌. ಸೇರಿದಂತೆಬಹುತೇಕ ಮಂದಿ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು.

***

ಉನ್ನತ ಶಿಕ್ಷಣ ಪಡೆದವರು ವಿವಿಧ ಪೊಲೀಸ್‌ ಹುದ್ದೆಗಳಿಗೆ ಸೇರ್ಪಡೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಇಲಾಖೆಯಲ್ಲೂ ಅರ್ಹತೆಗೆ ತಕ್ಕಂತೆ ಹುದ್ದೆಗಳನ್ನು ಹೊಂದಲು ಅವಕಾಶವಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು

–ಚ್‌.ಜಿ.ರಾಘವೇಂದ್ರ ಸುಹಾಸ್‌, ಐಜಿಪಿ, ಉತ್ತರ ವಲಯ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.