ಬೆಂಗಳೂರು: 2018ರಲ್ಲಿ ಜೆಡಿಎಸ್ ಜತೆ ಸೇರಿ ಸಮ್ಮಿಶ್ರ ಸರ್ಕಾರ ಮಾಡಿದ್ದರಿಂದಲೇ ಕಾಂಗ್ರೆಸ್ನ 14 ಶಾಸಕರು ಪಕ್ಷ ತೊರೆದರು. ಸಮ್ಮಿಶ್ರ ಸರ್ಕಾರ ಮಾಡದಿದ್ದರೆ ಅವರು ಪಕ್ಷ ಬಿಡುತ್ತಿರಲಿಲ್ಲ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಶುಕ್ರವಾರ ನಡೆದ ಬೆಂಗಳೂರು ವಿಭಾಗ ಮಟ್ಟದ ಕಾಂಗ್ರೆಸ್ ಮುಖಂಡರ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ‘ಜನರ ಜತೆಗಿನ ಸಂಪರ್ಕದ ಮೂಲಕವೇ ಯಾವುದೇ ರಾಜಕೀಯ ಪಕ್ಷ ಯಶಸ್ಸು ಗಳಿಸಲು ಸಾಧ್ಯ. ಪಕ್ಷಕ್ಕೆ ಈಗ ಆಗಿರುವುದು ತಾತ್ಕಾಲಿಕ ಹಿನ್ನಡೆ. ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರೇ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ. ಈಗ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧದ ಹೋರಾಟಕ್ಕಿಂತಲೂ ಆರ್ಎಸ್ಎಸ್ನ ಕೋಮುವಾದಿ ರಾಜಕೀಯದ ವಿರುದ್ಧ ಹೋರಾಡುವುದು ಮುಖ್ಯ ಎಂದರು.
ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಶಿಲಾನ್ಯಾಸ ನೀಡುವಾಗ ‘ಸನಾತನ ಪ್ರಗತಿಪರ ಧರ್ಮದ ಮರುಸೃಷ್ಟಿ’ ಎಂದು ಹೇಳಿದ್ದಾರೆ. ಬಸವಣ್ಣ ಸನಾತನ ಧರ್ಮದ ವಿರುದ್ಧ ಹೋರಾಟ ಮಾಡಿದ್ದರು. ಆರ್ಎಸ್ಎಸ್ ಕುತಂತ್ರದಿಂದ ಯಡಿಯೂರಪ್ಪ ಅವರು ಬಸವಣ್ಣನಿಗೆ ಅವಮಾನ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.