ADVERTISEMENT

ಬೆಳಗಾವಿ | ಅನುಮತಿಗೆ ಜಿಲ್ಲಾಧಿಕಾರಿ ನಿರಾಕರಣೆ: ಮಹಾಮೇಳಾವ್‌ ವಿಫಲ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2024, 13:58 IST
Last Updated 9 ಡಿಸೆಂಬರ್ 2024, 13:58 IST
<div class="paragraphs"><p>ಬೆಳಗಾವಿಯಲ್ಲಿ ಮಹಾರಾಷ್ಟ್ರ ಪರ ಘೋಷಣೆ ಕೂಗಿದ ಎಂಇಎಸ್‌ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು ‌</p></div>

ಬೆಳಗಾವಿಯಲ್ಲಿ ಮಹಾರಾಷ್ಟ್ರ ಪರ ಘೋಷಣೆ ಕೂಗಿದ ಎಂಇಎಸ್‌ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು ‌

   

ಪ್ರಜಾವಾಣಿ ಚಿತ್ರ

ಬೆಳಗಾವಿ: ವಿಧಾನಮಂಡಲ ಚಳಿಗಾಲದ ಅಧಿವೇಶನ ವಿರೋಧಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿಯು (ಎಂಇಎಸ್‌) ನಗರದಲ್ಲಿ ಸೋಮವಾರ ನಡೆಸಲು ಯೋಜಿಸಿದ್ದ ಮಹಾಮೇಳಾವ್‌ ವಿಫಲವಾಯಿತು.

ADVERTISEMENT

ಪೊಲೀಸರ ಬಿಗಿ ಭದ್ರತೆ ಮಧ್ಯೆಯೂ ಕ್ಯಾಂಪ್ ಪ್ರದೇಶ, ಕೇಳಕರ ಬಾಗ್‌ ಹಾಗೂ ಕಿರ್ಲೋಸ್ಕರ್ ರಸ್ತೆಯಿಂದ ಸಂಭಾಜಿ ವೃತ್ತದ ಕಡೆಗೆ ಗುಂಪು ಗುಂಪಾಗಿ ಓಡಿಬಂದ ಎಂಇಎಸ್‌ನ 50ಕ್ಕೂ ಅಧಿಕ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಆಗ, ‘ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ್, ಭಾಲ್ಕಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿ’ ಹಾಗೂ ‘ನಾವು ಇರುವುದಾದರೆ ಮಹಾರಾಷ್ಟ್ರದಲ್ಲಿ, ಇಲ್ಲದಿದ್ದರೆ ಜೈಲಿನಲ್ಲಿ’ ಎಂದು ಕಾರ್ಯಕರ್ತರು ಮಹಾರಾಷ್ಟ್ರ ಪರ ಘೋಷಣೆ ಕೂಗಿದರು.

‘ಜಿಲ್ಲಾಡಳಿತದಿಂದ ಅನುಮತಿ ಸಿಗಲಿ ಅಥವಾ ಬಿಡಲಿ. ನಾವು ದೊಡ್ಡ ಪ್ರಮಾಣದಲ್ಲಿ ಮಹಾಮೇಳಾವ್‌ ಮಾಡುತ್ತೇವೆ. ಅಪಾರ ಸಂಖ್ಯೆಯಲ್ಲಿ ಜನರನ್ನು ಸೇರಿಸಿ, ನಮ್ಮ ಹಕ್ಕೊತ್ತಾಯ ಮಂಡಿಸುತ್ತೇವೆ’ ಎಂದು ಎಂಇಎಸ್‌ ಮುಖಂಡರು ಅಬ್ಬರಿಸಿದ್ದರು. ಆದರೆ, ಅನುಮತಿ ನಿರಾಕರಿಸಿದ ಜಿಲ್ಲಾಡಳಿತ ಇದಕ್ಕೆ ಬ್ರೇಕ್‌ ಹಾಕಿತು.

ಮಹಾಮೇಳಾವ್‌ ತಡೆಯುವ ದೃಷ್ಟಿಯಿಂದ ಧರ್ಮವೀರ ಸಂಭಾಜಿ ವೃತ್ತ, ಮಹಾದ್ವಾರ ರಸ್ತೆಯ ಸಂಭಾಜಿ ಉದ್ಯಾನ, ಎಸ್‌ಪಿಎಂ ರಸ್ತೆಯ ಶಿವಾಜಿ ಉದ್ಯಾನ ಮತ್ತು ಟಿಳಕವಾಡಿಯ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ವಿವಿಧ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿ, ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.

ಎಂಇಎಸ್‌ನ ಕಾರ್ಯಧ್ಯಕ್ಷರೂ ಆಗಿರುವ ಮಾಜಿ ಶಾಸಕ ಮನೋಹರ ಕಿಣೇಕರ ಹಾಗೂ ಖಜಾಂಚಿ ಪ್ರಕಾಶ ಮರಗಾಲೆ ಸಂಭಾಜಿ ವೃತ್ತದ ಕಡೆ ತೆರಳುತ್ತಿದ್ದಾಗ, ರಾಮಲಿಂಗಖಿಂಡ ಗಲ್ಲಿಯ ಎಂಇಎಸ್‌ ಕಚೇರಿ ಬಳಿ ಪೊಲೀಸರು ವಶಕ್ಕೆ ಪಡೆದರು. ಮಾಜಿ ಶಾಸಕ ದಿಗಂಬರ ಪಾಟೀಲ ಅವರನ್ನು ಸಂಭಾಜಿ ವೃತ್ತದಲ್ಲಿ ವಶಕ್ಕೆ ಪಡೆಯಲಾಯಿತು.

ವಿವಿಧ ದಿಕ್ಕುಗಳಿಂದ ಆಗಾಗ ಸಂಭಾಜಿ ವೃತ್ತದತ್ತ ಬಂದ ಕಾರ್ಯಕರ್ತರನ್ನು ಗುರುತಿಸಲಾಗದೆ ಪೊಲೀಸರು ಹೈರಾಣಾದರು.

ಶಿವಸೇನೆ ಕಾರ್ಯಕರ್ತರ ಬಂಧನ: ಮಹಾಮೇಳಾವ್‌ ಬೆಂಬಲಿಸಿ ಬೆಳಗಾವಿಗೆ ಬರುತ್ತಿದ್ದ ಶಿವಸೇನೆ (ಉದ್ಧವ್‌ ಠಾಕ್ರೆ ಬಣ) ಕೊಲ್ಹಾಪುರ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ದೇವಣೆ ಹಾಗೂ ಅವರ ಸಂಗಡಿಗರನ್ನು ನಿಪ್ಪಾಣಿ ತಾಲ್ಲೂಕಿನ ಕೊಗನೊಳ್ಳಿ ಚೆಕ್‌ಪೋಸ್ಟ್‌ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಪೊಲೀಸರು ಬಂಧಿಸಿದರು.

ವಿಜಯ ದೇವಣೆ, ಮುಖಂಡರಾದ ಸಂಜಯ ಪೋವಾರ, ಸುನೀಲ ಶಿಂತ್ರೆ, ಸುನೀಲ ಮೋದಿ ಸೇರಿದಂತೆ 75ರಿಂದ 80 ಜನರು ಬೆಳಗಾವಿ ಜಿಲ್ಲೆ ಪ್ರವೇಶಕ್ಕೆ ಮುಂದಾದರು. ಕರ್ನಾಟಕ–ಮಹಾರಾಷ್ಟ್ರ ಗಡಿಯಲ್ಲೇ ಅವರನ್ನು ತಡೆಯಲಾಯಿತು. ಗಡಿ ವಿವಾದದ ಕುರಿತಾಗಿ ಘೋಷಣೆ ಕೂಗಿದ ಕಾರ್ಯಕರ್ತರು ಸುಮಾರು 20 ನಿಮಿಷ ಧರಣಿ ನಡೆಸಿದರು. ಮಹಾರಾಷ್ಟ್ರ ಪೊಲೀಸರು ಅವರನ್ನು ವಶಕ್ಕೆ ಪಡೆದು ಕರೆದೊಯ್ದರು.

ರಾಜ್ಯಕ್ಕೆ ದೇವಣೆ ಮತ್ತು ಅವರ ಸಂಗಡಿಗರ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.