ADVERTISEMENT

ಬೆಳಗಾವಿಗೆ ಮತ್ತಷ್ಟು ಸಚಿವ ಸ್ಥಾನ?

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2019, 10:01 IST
Last Updated 9 ಡಿಸೆಂಬರ್ 2019, 10:01 IST
   

ಬೆಳಗಾವಿ: ಲಕ್ಷ್ಮಣ ಸವದಿ ಉಪ ಮುಖ್ಯಮಂತ್ರಿಯಾಗಿದ್ದಾರೆ, ಶಶಿಕಲಾ ಜೊಲ್ಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದು ಉಪ ಚುನಾವಣೆಯಲ್ಲಿ ಪಕ್ಷವು ಅಭೂತಪೂರ್ವ ಗೆಲುವು ಸಿಕ್ಕಿರುವುದರಿಂದಾಗಿ, ಮತ್ತೆ ನಾಲ್ವರಿಗೆ ಸಚಿವ ಸ್ಥಾನ ಸಿಗುವುದೇ ಎನ್ನುವ ನಿರೀಕ್ಷೆ ಚಿಗುರಿದೆ.

ಗೋಕಾಕದಲ್ಲಿ ಪ್ರಚಾರ ಮಾಡಿದ್ದ ಶಾಸಕ ಬಾಲಚಂದ್ರ ಜಾರಕಿಹೊಳಿ ಮೊದಲಾದವರು ರಮೇಶ ಜಾರಕಿಹೊಳಿ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ದೊರೆಯುತ್ತದೆ ಎಂದು ಭರವಸೆ ನೀಡಿ ಮತಯಾಚಿಸಿದ್ದರು. ಈ ನಿಟ್ಟಿನಲ್ಲಿ ನೋಡಿದರೆ ರಮೇಶಗೆ ಡಿಸಿಎಂ ಪಟ್ಟ ಸಿಗುವುದೇ ಎನ್ನುವ ಲೆಕ್ಕಾಚಾರ ಆರಂಭವಾಗಿದೆ.

ಅಥಣಿ ಮತ್ತು ಕಾಗವಾಡದಲ್ಲಿ ಪ್ರಚಾರ ಮಾಡಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕ್ರಮವಾಗಿ ಮಹೇಶ ಕುಮಠಳ್ಳಿ ಹಾಗೂ ಶ್ರೀಮಂತ ಪಾಟೀಲ ಅವರನ್ನು ಸಚಿವರನ್ನಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಭಾವಿ ಸಚಿವರೇ ಎಂದೇ ಕರೆದಿದ್ದರು. ಉಪ ಮುಖ್ಯಮಂತ್ರಿ ಸವದಿ ಕೂಡ ಇದನ್ನೇ ಮುಂದಿಟ್ಟು ಮತ ಕೇಳಿದ್ದರು. ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಂಡರೆ ಈ ಮೂವರಿಗೂ ಸಚಿವ ಸ್ಥಾನ ಸಿಗಬಹುದಾಗಿದೆ. ಅಲ್ಲದೇ, ಹುಕ್ಕೇರಿಯ ಶಾಸಕ ಉಮೇಶ ಕತ್ತಿ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ‘ಕತ್ತಿಗೆ ಕೊಡದಿದ್ದರೆ ಬಿಡುತ್ತಾರೆಯೇ?’ ಎಂದು ಖುದ್ದು ಯಡಿಯೂರಪ್ಪ ಅವರೇ ಪ್ರತಿಕ್ರಿಯಿಸಿದ್ದರು. ಶೀಘ್ರವೇ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿರುವುದರಿಂದಾಗಿ, ಜಿಲ್ಲೆಯ ಇನ್ಯಾರು ಸಂಪುಟ ಸೇರಬಹುದು ಎನ್ನುವ ಚರ್ಚೆಗಳು ಆರಂಭವಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.