ಬೆಂಗಳೂರು: ‘ನಿನ್ನ ಪತ್ನಿ ಯಾವ ಜಾತಿಗೆ ಹುಟ್ಟಿದವರು ಎಂಬುವುದು ನಿನಗೆ ಗೊತ್ತಾ. ಆ ಬಗ್ಗೆ, ಮೊದಲು ಡಿಎನ್ಎ ಪರೀಕ್ಷೆ ಆಗಲಿ’ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರನ್ನು ಉದ್ದೇಶಿಸಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ನೀಡಿದ ಹೇಳಿಕೆ ವಿವಾದ ಸೃಷ್ಟಿಸಿದೆ.
ಗಾಂಧಿ ಭಾವಚಿತ್ರಕ್ಕೆ ಗುಂಡು ಹಾರಿಸಿರುವ ಹಿಂದೂ ಮಹಾಸಭಾ ಸದಸ್ಯರ ನಡೆಯನ್ನು ಖಂಡಿಸಿ ರೇಸ್ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಬಳಿ ಕಾಂಗ್ರೆಸ್ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಪತ್ನಿ ಬಗ್ಗೆ ಹೆಗಡೆ ಕೆಟ್ಟ ಪದ ಬಳಕೆ ಮಾಡಿದ್ದಾರೆ ಎಂಬ ಕಾರಣಕ್ಕೆ ಗೋಪಾಲಕೃಷ್ಣ ಅವರು ಈ ಹೇಳಿಕೆ ನೀಡಿದ್ದರು.
‘ನೀವಷ್ಟೇ ಹಿಂದುಗಳಲ್ಲ. ನಾವು ಕೂಡ ಹಿಂದುಗಳೇ. ನೀಲಿಚಿತ್ರ ನೋಡಿದವರ, ಹೆಣ್ಣು ಮಕ್ಕಳ ಮೇಲೆ ಹಲ್ಲೆ ಮಾಡಿದ ಎಷ್ಟು ಮಂದಿಯ ಕೈ ಕತ್ತರಿಸಿದ್ದೀರಿ’ ಎಂದು ಬಿಜೆಪಿ ನಾಯಕರನ್ನು ಗೋಪಾಲಕೃಷ್ಣ ಪ್ರಶ್ನಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ‘ಮೈತ್ರಿ ಸರ್ಕಾರಕ್ಕೆ ಕುಮಾರಸ್ವಾಮಿ ಮುಖ್ಯಮಂತ್ರಿ.ರಾಜ್ಯಮಟ್ಟದಲ್ಲಿ ಸಿದ್ದರಾಮಯ್ಯ ನಮ್ಮ ಪಕ್ಷದ ನಾಯಕರು. ರಾಷ್ಟ್ರಮಟ್ಟದಲ್ಲಿ ರಾಹುಲ್ ಗಾಂಧಿ ನಾಯಕರು’ ಎಂದರು.
‘ಅತೃಪ್ತ ಶಾಸಕರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ. ಅವರ ಬಗ್ಗೆ ನಮಗೆ ವಿಶ್ವಾಸವಿದೆ. ಉಮೇಶ ಜಾಧವ್ ಜೊತೆ ನಾನು ಮಾತನಾಡಿದ್ದೇನೆ’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.