ಮಂಡ್ಯ: ಹಬ್ಬದ ಬಿಡುವಿನ ಬಳಿಕ, ಪಾಂಡವಪುರ ತಾಲ್ಲೂಕಿನ ಜಕ್ಕನಹಳ್ಳಿ ಕ್ರಾಸ್ನಿಂದ ಗುರುವಾರ ಪುನರಾರಂಭ ಗೊಳ್ಳಲಿರುವ ಭಾರತ್ ಜೋಡೊ ಪಾದಯಾತ್ರೆಯಲ್ಲಿ, ಪುತ್ರ ರಾಹುಲ್ ಗಾಂಧಿ ಅವರೊಂದಿಗೆ ಎಐಸಿಸಿಅಧ್ಯಕ್ಷೆ ಸೋನಿಯಾ ಗಾಂಧಿ ಹೆಜ್ಜೆ ಹಾಕಲಿದ್ದಾರೆ.
ಅ.3ರಂದೇ ರಾಜ್ಯಕ್ಕೆ ಬಂದಿದ್ದ ಅವರು ಎಚ್.ಡಿ.ಕೋಟೆ ತಾಲ್ಲೂಕಿನ ಬೀರಂಬಳ್ಳಿಯ ಆರೆಂಜ್ ಕೌಂಟಿ ರೆಸಾರ್ಟ್ನಲ್ಲಿ ಪುತ್ರನೊಂದಿಗೆ 2 ದಿನ ವಾಸ್ತವ್ಯ ಹೂಡಿದ್ದರು. ಬಿಡುವಿನ ನಂತರ ರಾಹುಲ್ ಗಾಂಧಿ ಗುರುವಾರ ಬೆಳಿಗ್ಗೆ 6.30ಕ್ಕೆ ಪಾಂಡವಪುರ ಸಮೀಪದ ಬೆಳ್ಳಾಳೆ ಗ್ರಾಮದ ಮೂಲಕ ಪಾದಯಾತ್ರ ಆರಂಭಿಸಲಿದ್ದಾರೆ.
ಯಾತ್ರೆಯು ಬೆಳಿಗ್ಗೆ 8.30ಕ್ಕೆ ಮೇಲುಕೋಟೆ ಸಮೀಪದ ಜಕ್ಕನಹಳ್ಳಿ ಕ್ರಾಸ್ ತಲುಪಲಿದೆ. ಹೊನ್ನೆಮಡು ಗ್ರಾಮದ ಬಳಿಯ ಹೆಲಿಪ್ಯಾಡ್ಗೆ ಬಂದಿಳಿಯುವ ಸೋನಿಯಾ ಗಾಂಧಿ ಜಕ್ಕನಹಳ್ಳಿ ಕ್ರಾಸ್ನಲ್ಲಿ ಪಾದಯಾತ್ರೆ ಸೇರಿಕೊಳ್ಳಲಿದ್ದಾರೆ.
ಉಪಾಹಾರ ಸೇವನೆ ನಂತರ ಪಾದಯಾತ್ರೆ ಮುಂದುವರಿಸಲಿದ್ದಾರೆ. ಅವರು 20 ನಿಮಿಷ ಹೆಜ್ಜೆ ಹಾಕಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳುತಿಳಿಸಿವೆ.
ಬೆಳಿಗ್ಗೆ 11.30ರ ಹೊತ್ತಿಗೆ ಪಾದಯಾತ್ರೆ ನಾಗಮಂಗಲ ತಾಲ್ಲೂಕು ಪ್ರವೇಶಿಸಲಿದೆ. ಮಧ್ಯಾಹ್ನ 12ಗಂಟೆಗೆ ಖರಡ್ಯ ಗ್ರಾಮದ ಬಳಿ ರಾಹುಲ್ಗಾಂಧಿ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ.
ಪಕ್ಷದ ರಾಷ್ಟ್ರೀಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ರಣದೀಪ್ ಸಿಂಗ್ ಸುರ್ಜೇವಾಲ, ವೇಣುಗೋಪಾಲ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಾಲ್ಗೊಳ್ಳಲಿದ್ದಾರೆ.
ಬಿಗಿ ಬಂದೋಬಸ್ತ್: ಸೋನಿಯಾ ಗಾಂಧಿ ಪಾಲ್ಗೊಳ್ಳುತ್ತಿರುವುದರಿಂದ ಪೊಲೀಸ್ ಭದ್ರತೆ ಬಿಗಿಗೊಳಿಸಲಾಗಿದೆ. ‘ಭದ್ರತೆಯಲ್ಲಿ ಲೋಪವಾಗಿದೆ’ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಜಿಲ್ಲಾ ಪೊಲೀಸರೊಂದಿಗೆ ಸಭೆ ನಡೆಸಿದ್ದಾರೆ.
‘ಕೇಂದ್ರೀಯ ಭದ್ರತಾ ಸಿಬ್ಬಂದಿಯೊಂದಿಗೆ ಸ್ಥಳೀಯ ಪೊಲೀಸರು ಭದ್ರತೆ ನೀಡಲಿದ್ದಾರೆ. ನಮ್ಮ ಸಿಬ್ಬಂದಿ ಈಗಾಗಲೇ ಪಾದಯಾತ್ರೆ ಸ್ಥಳಕ್ಕೆ ತೆರಳಿದ್ದಾರೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.