ಬೆಂಗಳೂರು: ‘ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ರೂಪಾಯಿಗಳ ಅವ್ಯವಹಾರ ಪ್ರಕರಣದ ಆರೋಪಿಯಾಗಿದ್ದ ಉದ್ಯಮಿ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಯ ಜೊತೆ ಇಬ್ಬರು ಎಸ್.ಪಿ ಕೇಡರ್ ಪೊಲೀಸ್ ಅಧಿಕಾರಿಗಳ ಎಸ್ಐಟಿ ನೇಮಕ ಮಾಡಿದ್ದ ತನ್ನ ಈ ಹಿಂದಿನ ಆದೇಶವನ್ನು ಹೈಕೋರ್ಟ್ ಸ್ಥಿರೀಕರಿಸಿದೆ. ಕೂಡಲೇ ತನಿಖೆ ಆರಂಭಿಸುವಂತೆ ಎಸ್ಐಟಿಗೆ ನಿರ್ದೇಶಿಸಿದೆ.
ಈ ಸಂಬಂಧ ರಾಜ್ಯ ಪ್ರಾಸಿಕ್ಯೂಷನ್ ತೆಗೆದಿದ್ದ ತಕರಾರನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಪರಿಶೀಲಿಸಿತಲ್ಲದೆ, ‘ಹೈಕೋರ್ಟ್ ನೀಡಿರುವ ಆದೇಶವನ್ನು ಸಂಪೂರ್ಣ ಅನುಪಾಲನೆ ಮಾಡಲಾಗುವುದು ಎಂದು ಸಿಬಿಐ ತಿಳಿಸಿರುವ ಕಾರಣ ಈ ಹಿಂದೆ ನೀಡಲಾದ ಆದೇಶದಲ್ಲಿ ಯಾವುದೇ ಮಾರ್ಪಾಡು ಮಾಡುವುದಿಲ್ಲ’ ಎಂದು ಆದೇಶಿಸಿತು.
ವಿಚಾರಣೆ ವೇಳೆ ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್, ‘ಈ ಪೀಠ ನೀಡಿರುವ ಆದೇಶವನ್ನು ಪಾಲಿಸಲು ಸಿಬಿಐ ಬದ್ಧವಾಗಿದೆ. ಆದೇಶದಲ್ಲಿ ಯಾವುದೇ ಮಾರ್ಪಾಡು ಮಾಡುವಂತೆ ನಾವು ಕೇಳುತ್ತಿಲ್ಲ. ತಮ್ಮ ಆದೇಶದ ಪ್ರಕಾರ ತನಿಖೆ ನಡೆಸುತ್ತೇವೆ. ಯಾರನ್ನೂ ಬದಲಾಯಿಸುವುದಿಲ್ಲ’ ಎಂದು ತಿಳಿಸಿದರು. ಇದಕ್ಕೆ ಪ್ರತಿಯಾಗಿ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್, ಸಿಬಿಐ ವಿವರಣೆ ಮತ್ತು ನ್ಯಾಯಪೀಠದ ಆದೇಶಕ್ಕೆ ಸಹಮತ ವ್ಯಕ್ತಪಡಿಸಿದರು.
‘ಈ ಹಿಂದೆ ಇದೇ ನ್ಯಾಯಪೀಠ ಈ ಕುರಿತಾದ ಅರ್ಜಿ ವಿಚಾರಣೆ ನಡೆಸಿ ಜೀವಾ ಆತ್ಮಹತ್ಯೆಯ ತನಿಖೆಗೆ ಎಸ್ಐಟಿ ರಚನೆ ಮಾಡಿ ಆದೇಶಿಸಿತ್ತು. ‘ಎಸ್ಐಟಿಯಲ್ಲಿ ಸಿಬಿಐನ ಎಸ್.ಪಿ ವಿನಾಯಕ ವರ್ಮಾ, ಕರ್ನಾಟಕ ಗೃಹ ರಕ್ಷಕ ದಳದ ಎಸ್.ಪಿ ಹಕಾಯ ಅಕ್ಷಯ್ ಮಛ್ಛೀಂದ್ರ ಮತ್ತು ಆಂತರಿಕ ಭದ್ರತಾ ವಿಭಾಗದ ಎಸ್.ಪಿ ನಿಶಾ ಜೇಮ್ಸ್ ಸದಸ್ಯರಾಗಿ ಇರುತ್ತಾರೆ’ ಎಂದು ನ್ಯಾಯಪೀಠ ತಿಳಿಸಿತ್ತು.
ಈ ಆದೇಶದ ಬಗ್ಗೆ ರಾಜ್ಯ ಪ್ರಾಸಿಕ್ಯೂಷನ್ ವಿವರಣೆ ಬಯಸಿ ತಕರಾರು ವ್ಯಕ್ತಪಡಿಸಿತ್ತು. ‘ತಂಡದ ಮೂವರೂ ಅಧಿಕಾರಿಗಳು ಎಸ್.ಪಿ ಕೇಡರ್ ಅಧಿಕಾರಿಗಳಾಗಿದ್ದು, ಒಬ್ಬರು ಮತ್ತೊಬ್ಬರ ಅಧೀನದಲ್ಲಿ ಕೆಲಸ ಮಾಡುವುದು ಹೇಗೆ’ ಎಂದು ಪ್ರಶ್ನಿಸಿತ್ತು. ಅಂತೆಯೇ, ‘ತಂಡಕ್ಕೆ ಡಿಜಿ ಅಥವಾ ಡಿಐಜಿ ದರ್ಜೆಯ ಅಧಿಕಾರಿಯನ್ನು ನಿಯುಕ್ತಿಗೊಳಿಸಬೇಕು’ ಎಂದು ಮನವಿ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.