ಬಿಡದಿ (ರಾಮನಗರ): ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಅವರು ಪಟ್ಟಣದ ರೈಲು ನಿಲ್ದಾಣಕ್ಕೆ ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿದರು. ನಿಲ್ದಾಣದಲ್ಲಿ ನಡೆಯುತ್ತಿರುವ ನವೀಕರಣ ಕಾಮಗಾರಿಯನ್ನು ಪರಿಶೀಲಿಸಿದರು.
ನಿಲ್ದಾಣದ ಪ್ಲಾಟ್ ಫಾರಂ ವಿಸ್ತರಣೆ ಸೇರಿದಂತೆ ವಿವಿಧ ಕಾಮಗಾರಿಯನ್ನು ಪರಿಶೀಲನೆ ನಡೆಸಿದ ಸೋಮಣ್ಣ, ಅಧಿಕಾರಿಗಳಿಂದ ಪ್ರಗತಿಯ ಮಾಹಿತಿ ಪಡೆದರು. ಪ್ಲಾಟ್ ಫಾರಂನಲ್ಲಿ ನಡೆದುಕೊಂಡು ಹೋಗಿ ಪ್ರಯಾಣಿಕರಿಂದ ರೈಲ್ವೆ ಸೇವೆ ಕುರಿತು ಅಭಿಪ್ರಾಯ ಸಂಗ್ರಹಿಸಿದರು.
ಈ ವೇಳೆ ಪ್ರಯಾಣಿಕರು, ‘ಬಿಡದಿ ರೈಲು ನಿಲ್ದಾಣದಲ್ಲಿ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯಾಗಬೇಕು. ಪಟ್ಟಣದಿಂದ ಬಾನಂದೂರಿಗೆ ಹೋಗಲು ನಿಲ್ದಾಣದಲ್ಲಿ ಕೆಳ ಸೇತುವೆ ನಿರ್ಮಿಸಬೇಕು. ಕೈಗಾರಿಕಾ ಪ್ರದೇಶವಾಗಿರುವ ಪಟ್ಟಣಕ್ಕೆ ನಿತ್ಯ ಸಾವಿರಾರು ಜನ ರೈಲಿನಲ್ಲಿ ಬರುತ್ತಾರೆ. ಹಾಗಾಗಿ, ಇಲ್ಲಿ ಪ್ರಮುಖ ರೈಲುಗಳ ನಿಲುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಈ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು’ ಎಂದು ಭರವಸೆ ನೀಡಿದರು.
ಇದೇ ವೇಳೆ ಸಚಿವರಿಗೆ ಮನವಿ ಕೊಟ್ಟ ಶಾಸಕ ಎಚ್. ಸಿ. ಬಾಲಕೃಷ್ಣ, ‘ವಂಡರ್ಲಾಗೆ ಹೋಗುವ ಹೆಜ್ಜಾಲ ರೈಲು ಮಾರ್ಗದ ಮೇಲ್ಸೇತುವೆಯು ತುಂಬಾ ಕಿರಿದಾಗಿದ್ದು, ಒಂದೇ ಸಲ ಎರಡು ವಾಹನಗಳು ಸಂಚರಿಸಲು ಸಾಧ್ಯವಿಲ್ಲ. ಈ ಮೇಲ್ಸೇತುವೆಯನ್ನು ಅಗಲ ಮಾಡಬೇಕು’ ಎಂದು ಒತ್ತಾಯಿಸಿದರು. ಅದಕ್ಕೆ ಸಚಿವರು, ‘ಈ ಕುರಿತು ಸಂಬಂಧಪಟ್ಟವರ ಜೊತೆ ಮಾತನಾಡಿ ಕ್ರಮ ಕೈಗೊಳ್ಳಲಾಗುವುದು’ ಎಂದರು.
ನಿಲ್ದಾಣಕ್ಕೆ ಬಂದ ಸಚಿವರಿಗೆ ಸಂಸದ ಡಾ. ಸಿ.ಎನ್. ಮಂಜುನಾಥ್, ಮಾಜಿ ಶಾಸಕ ಎ. ಮಂಜುನಾಥ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ತಹಶೀಲ್ದಾರ್ ತೇಜಸ್ವಿನಿ, ರೈಲ್ವೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.